ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ವಲಯದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಹರಳು ಕಲ್ಲುಸಾಗಣೆ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಮನೆ, ತೋಟಗಳಲ್ಲಿ ಅಡಗಿಸಿಟ್ಟಿದ್ದ ಒಟ್ಟು 16.44 ಕೆ.ಜಿ. ಹರಳು ಕಲ್ಲುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
16.44 ಕೆಜಿ ಹರಳು ಕಲ್ಲು ವಶ ಮೇಕೇರಿ ಗ್ರಾಮದ ಎಂ.ಕೆ ಸಲೀಂ, ಮಡಿಕೇರಿ ತ್ಯಾಗರಾಜ ಕಾಲನಿಯ ಎಂ.ಡಿ ಶರೀಫ್ ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಮಡಿಕೇರಿ ನಿವಾಸಿ ಅನಿಲ್ ಕುಮಾರ್, ತ್ಯಾಗರಾಜ ಕಾಲನಿಯ ಮಹಮ್ಮದ್ ಅಲಿ, ಎಂ.ಪಿ.ಸುಲ್ತಾನ್, ಬೆಟ್ಟಗೇರಿಯ ರಶೀದ್ ಹಾಗೂ ತಣ್ಣಿಮಾನಿ ಗ್ರಾಮದ ಮಿಟ್ಟು(ರಂಜಿತ್), ಪಾಪು(ಹರೀಶ್), ಪುಟ್ಟ(ಲಕ್ಷ್ಮಣ), ಈ.ಆರ್ ಅಬ್ದುಲ್ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ.
ಖಚಿತ ಮಾಹಿತಿಯ ಮೇರೆಗೆ ಮಡಿಕೇರಿಯ ಗಣಪತಿ ಬೀದಿಯ ಎಂ.ಪಿ ಸುಲ್ತಾನ್ ಅವರ ಮನೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 12.35 ಕೆ.ಜಿಯಷ್ಟು ಹರಳು ಕಲ್ಲನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಸುಲ್ತಾನ್ ತಲೆಮರೆಸಿಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ಸಂಪಾಜೆ ಗ್ರಾಮದ ಈ.ಆರ್ ಅಬ್ದುಲ್ ಮನೆ ಮೇಲೆಯೂ ದಾಳಿ ನಡೆಸಿದ್ದು, 106 ಕೆ.ಜಿಯಷ್ಟು ಹರಳು ಕಲ್ಲು ಪತ್ತೆಯಾಗಿದೆ. ಇದು ಸುಳ್ಯ ಅರಣ್ಯ ಇಲಾಖೆ ವಶದಲ್ಲಿದೆ. ಮಡಿಕೇರಿ ತಾಲೂಕಿನಲ್ಲಿ ಒಟ್ಟು 16.44 ಕೆ.ಜಿ ಹರಳು ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರಣ್ ಮಾರ್ಗದರ್ಶನದಲ್ಲಿ ಮಡಿಕೇರಿ ಎಸಿಎಫ್ ನಿಲೇಶ್ ಶಿಂಧೆ ನೇತೃತ್ವದಲ್ಲಿ ಸಂಪಾಜೆ-ಮಡಿಕೇರಿ ವಲಯದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
1926ಕ್ಕೆ ಕರೆ ಮಾಡಿ ದೂರು ನೀಡಿ:
ಅಕ್ರಮ ಮರ ಸಾಗಣೆ, ಮರ ಕಡಿತಲೆ, ಹರಳು ಕಲ್ಲುದಂಧೆ, ಕಲ್ಲು ಬೇಟೆ ಇನ್ನಿತರ ಅರಣ್ಯ ಅಪರಾಧ ಕಂಡುಬಂದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 1926ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.