ಡಿಕೆಶಿಗೆ ಬಿಗ್ ರಿಲೀಫ್- ಇಡಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Public TV
2 Min Read
DKShi Supreme Court 1 copy

-ಡಿಕೆಶಿ ತಾಯಿ, ಪತ್ನಿಗೂ ನಿರಾಳ
-ಇಡಿ ಪರ ವಕೀಲರಿಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನ ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ದ್ವಿ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದೆ. ಇತ್ತ ಕರ್ನಾಟಕ ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ನೀಡಿದ ಆದೇಶವನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಡಿ.ಕೆ.ಶಿವಕುಮಾರ್ ಅರ್ಜಿ ವಿಚಾರಣೆ ಆಗುವರೆಗೂ ಹೊಸ ಸಮನ್ಸ್ ನೀಡುವಂತಿಲ್ಲ ಎಂದು ಇಡಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕರ್ನಾಟಕ ಹೈಕೋರ್ಟಿನಲ್ಲಿ ಡಿಕೆ ಶಿವಕುಮಾರ್ ಇಡಿ ಸಮನ್ಸ್ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಮತ್ತು ವಿಭಾಗೀಯ ಪೀಠವೂ ಅರ್ಜಿ ವಜಾ ಮಾಡಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಆದೇಶ ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇತ್ತ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಮತ್ತು ತಾಯಿ ಗೌರಮ್ಮರನ್ನು ಕೇವಲ ತನಿಖೆ ಮಾಡಬೇಕು ಹೊರತು ಬಂಧಿಸುವಂತಿಲ್ಲ ಎಂದು ಇಡಿಗೆ ಸುಪ್ರೀಂಕೋರ್ಟ್ ಸೂಚನೆಯನ್ನು ನೀಡಿದೆ.

ಇಡಿಗೆ ಕ್ಲಾಸ್: ಎಲ್ಲ ಹೈಕೋರ್ಟ್ ಆದೇಶವನ್ನು ಅನುಮಾನಿಸಬೇಡಿ. ಅರ್ಜಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಮಾಜಿ ಗೃಹ ಸಚಿವ ಮತ್ತು ಹಣಕಾಸು ಸಚಿವ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಎಲ್ಲ ಪ್ರಕರಣಗಳನ್ನು ಒಂದೇ ಮನೋಭಾವದಿಂದ ಕಾಣೋದನ್ನು ಬಿಡಬೇಕು. ಸರರ್ಕಾದ ತನಿಖಾ ಅಧಿಕಾರಿಗಳು ಮನಸ್ಥಿತಿ ಬದಲಾಯಿಸಿಕೊಳ್ಳಿ. ಹೈಕೋರ್ಟ್ ಆದೇಶಗಳ ಮೇಲೆ ಅನುಮಾನಿಸುವುದು ಸರಿಯಲ್ಲ. ಪ್ರಕರಣವನ್ನು ಒಂದಕ್ಕೊಂದು ಜೋಡಿಸುವುದನ್ನು ಬಿಡಿ ಎಂದು ಇಡಿ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.

ಪ್ರತಿ ಹೈಕೋರ್ಟ್ ಆದೇಶಗಳನ್ನು ಈ ರೀತಿ ಪರಿಗಣಿಸುವುದು ಸರಿಯಲ್ಲ. ಶಬರಿಮಲೆ ತೀರ್ಪನ್ನು ಸರ್ಕಾರಕ್ಕೆ ಒದಲು ಹೇಳಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು.

DK Shivakumar 2 copy

ದೆಹಲಿ ಹೈಕೋರ್ಟ್ ನಲ್ಲಿ ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್, ಡಿ.ಕೆ ಶಿವಕುಮಾರ್ ಒಬ್ಬ ಪ್ರಭಾವಿ ವ್ಯಕ್ತಿ, ಶಾಸಕ, ಮಾಜಿ ಸಚಿವರಾಗಿದ್ದವರು. ಪ್ರಕರಣ ಇನ್ನು ತನಿಖಾ ಹಂತದಲ್ಲಿರುವ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿದ್ದು, ಐಟಿ ವಿಚಾರಣೆ ವೇಳೆ ಇದು ಸಾಬೀತಾಗಿದೆ. ಅಲ್ಲದೇ ದೇಶವನ್ನು ತೊರೆಯುವ ಸಾಧ್ಯತೆಯೂ ಇದೆ. ಪ್ರಕರಣ ಸಾಕಷ್ಟು ಆಳವಾಗಿ ತನಿಖೆ ಆಗಬೇಕಿದ್ದು ಡಿ.ಕೆ ಶಿವಕುಮಾರ್ ಜೈಲಿಂದ ಹೊರಗಿದ್ದಲ್ಲಿ ತನಿಖೆಗೆ ತೊಂದರೆ ಆಗಬಹುದು ಅಂತಾ ಆರೋಪಿಸಿದ್ದರು.

ಪ್ರತಿವಾದ ಮಂಡಿಸಿದ್ದ ಡಿ.ಕೆ.ಶಿವಕುಮಾರ್ ಪರ ವಕೀಲ ಅಭಿಷೇಕ ಮನುಸಿಂಘ್ವಿ, ಐವತ್ತು ದಿನಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ಇನ್ನು ವಿಚಾರಣೆ ನಡೆಸುವ ಅಗತ್ಯ ಇಲ್ಲ. ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು. ಜಾಮೀನಿಗಾಗಿ ಯಾವುದೇ ಕಂಡಿಷನ್ ಫಾಲೋ ಮಾಡಲು ಸಿದ್ಧ ಅಲ್ಲದೇ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದ್ದರು.

DK Shivakumar

ವಾದ ಪ್ರತಿ ವಾದ ಆಲಿಸಿದ ದೆಹಲಿ ಹೈಕೋರ್ಟ್ ನ ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠ ಆರೋಗ್ಯದ ಕಾರಣಗಳನ್ನು ಆಧರಿಸಿ ಜಾಮೀನು ನೀಡಿತ್ತು. ಅಲ್ಲದೇ ತನಿಖೆಗೆ ಸಹಕರಿಸಬೇಕು ವಿದೇಶಕ್ಕೆ ತೆರಳುವ ಅನಿವಾರ್ಯತೆ ಬಂದರೆ ಮೊದಲು ಕೋರ್ಟ್ ಗಮನಕ್ಕೆ ತರಬೇಕು ಎಂದು ಸೂಚಿಸಿ ಷರತ್ತು ಬದ್ದ ಜಾಮೀನು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *