ಲಕ್ನೋ: ಈರುಳ್ಳಿಗಾಗಿ ಮಹಿಳೆಯರ ಗುಂಪೊಂದು ಪರಸ್ಪರ ಕಿತ್ತಾಡಿಕೊಂಡಿದ್ದು, ಘಟನೆಯಿಂದಾಗಿ ಐವರು ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಉತ್ತರಪ್ರದೇಶದಲ್ಲಿ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.
ಈರುಳ್ಳಿ ಬೆಲೆ ವಿಚಾರಕ್ಕೆ ಸಂಬಂಧಿಸಿದಂತೆ ನೇಹಾ ಹಾಗೂ ದೀಪ್ತಿ ಮಧ್ಯೆ ವಾಗ್ವಾದ ತಾರಕಕ್ಕೇರಿದೆ. ಅಲ್ಲದೆ ಈ ಮಧ್ಯೆ ಇಬ್ಬರ ಕಡೆಯಿಂದಲೂ ಮಹಿಳೆಯರು ಜಗಳಕ್ಕಿಳಿದಿದ್ದಾರೆ. ಪರಿಣಾಮ ಐವರು ಮಹಿಳೆಯರು ಆಸ್ಪತ್ರೆ ಪಾಲಾಗಿದ್ದಾರೆ.
ಏನಿದು ಘಟನೆ?
ಬುಧವಾರದಂದು ಈರುಳ್ಳಿ ಕೊಂಡುಕೊಳ್ಳಲು ವ್ಯಾಪಾರಿಯ ಬಳಿ ನೇಹಾ ಬಂದಿದ್ದಳು. ಅಲ್ಲದೆ ಕಡಿಮೆ ಬೆಲೆಗೆ ಈರುಳ್ಳಿ ಕೊಡುವಂತೆ ಚೌಕಾಸಿ ಮಾಡಿದ್ದಳು. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪ್ತಿ, ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ನಿನ್ನ ಬಳಿ ಖರೀದಿಸುವಷ್ಟು ಹಣವಿಲ್ಲ. ಹೀಗಾಗಿ ನೀನು ಯಾಕೆ ಚೌಕಾಸಿ ಮಾಡಿ ಸಮಯ ವ್ಯರ್ಥ ಮಾಡುತ್ತೀಯಾ ಮುಂದಕ್ಕೆ ಹೋಗು ಎಂದು ನೇಹಾಳಿಗೆ ಹೇಳಿದ್ದಾಳೆ.
ಇದರಿಂದ ಸಿಟ್ಟಿಗೆದ್ದ ನೇಹಾ ಹಾಗೂ ದೀಪ್ತಿ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಮಹಿಳೆಯರಿಬ್ಬರ ಜಗಳ ತಾರಕ್ಕೇರುತ್ತಿದ್ದಂತೆಯೇ ಉಳಿದ ಮಹಿಳೆಯರು ಕೂಡ ಸೇರಿಕೊಂಡು ಜಗಳ ಮತ್ತಷ್ಟು ಜೋರಾಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಗಾಯಗೊಂಡ ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಅಲ್ಲದೆ ಎರಡೂ ಕಡೆಯ ಮಹಿಳೆಯರು ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೋರ್ಟಿಗೆ ಹಾಜರುಪಡಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.