ಕೃಷ್ಣಮಠದ ‘ಸುಭದ್ರೆ’ ರಾತ್ರೋ ರಾತ್ರಿ ಹೊನ್ನಾಳಿ ಮಠಕ್ಕೆ ಸ್ಥಳಾಂತರ

Public TV
1 Min Read
UDP Elephant

-ಆನೆ ರವಾನೆ ಹಿಂದಿದೆ ಹಲವು ಅನುಮಾನ

ಉಡುಪಿ: ಶ್ರೀಕೃಷ್ಣ ಮಠದ ಆನೆ ಸುಭದ್ರೆಯನ್ನು ಹೊನ್ನಾಳಿ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಕಳೆದ ಎರಡು ದಶಕಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಆನೆ ಸುಭದ್ರೆಯನ್ನು ಇದೀಗ ಸ್ಥಳಾಂತರ ಮಾಡಲಾಗಿದೆ.

ಹೊನ್ನಾಳಿಯ ಮಠವೊಂದಕ್ಕೆ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ಕೊಂಡೊಯ್ಯಲಾಗಿದೆ. ಮಠದ ಹೊರವಲಯದಲ್ಲಿರುವ ಕನಕ ಶಾಪಿಂಗ್ ಮಾಲ್ ನ ನಿರ್ಮಾಣ ಹಂತದ ಕಟ್ಟಡದ ಮೂಲಕ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನ ನಡೆಯಿತು. ನಾಲ್ವರು ಮಾವುತರ ಪ್ರಯತ್ನದ ಹೊರತಾಗಿಯೂ ಆನೆ ಲಾರಿ ಹತ್ತಲು ಒಪ್ಪಲೇ ಇಲ್ಲ. ಲಾರಿಯ ಚಕ್ರಗಳು ಹೂತುಹೋಗಿ ಸಮಸ್ಯೆ ಉಂಟಾಯ್ತು. ಕೊನೆಗೂ ಹರಸಾಹಸಪಟ್ಟು, ಬೇರೆ ಲಾರಿಗೆ ಕಟ್ಟಿ ಎಳೆಯಲಾಯ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಲಾರಿ ಹತ್ತಿಸಿ ಆನೆಯನ್ನು ರವಾನಿಸಲಾಗಿದ್ದು, ಆನೆ ಸಾಗಾಟದ ವೇಳೆ ಸೂಕ್ತ ವೈದ್ಯರಾಗಲೀ, ಅರಣ್ಯ ಇಲಾಖೆಯವರಾಗಲೀ ಸ್ಥಳದಲ್ಲಿ ಇರಲಿಲ್ಲ.

UDP Elephant 1 copy

ಆನೆಯನ್ನು ಮಠಕ್ಕೆ ದಾನ ನೀಡಿದ ಮುಂಬೈನ ಉದ್ಯಮಿ ಕುಟುಂಬಕ್ಕೆ ಈ ಆನೆಯನ್ನು ಮಠದಿಂದ ಸಾಗಿಸುವುದಕ್ಕೆ ಮನಸ್ಸಿಲ್ಲ. ರಾತೋರಾತ್ರಿ ಗೌಪ್ಯವಾಗಿ ಆನೆಯನ್ನು ಹೊನ್ನಾಳಿಗೆ ಸಾಗಿಸಿರುವುದು ಅನುಮಾನಕ್ಕೆ ಎಡೆಮಾಡುತ್ತಿದೆ. ಆನೆಯ ಅನಾರೋಗ್ಯದ ಕಾರಣಕ್ಕೆ ಸ್ಥಳಾಂತರ ಮಾಡುವುದು ಅನಿವಾರ್ಯ. ಹೊನ್ನಾಳಿ ಮಠದಲ್ಲಿರುವ ಗಂಡಾನೆಯ ಮೂಲಕ ಸುಭದ್ರೆಯ ಸಂತಾನೋತ್ಪತ್ತಿಗೆ ಅವಕಾಶ ಮಾಡಲಾಗುತ್ತಿದೆ ಎಂದು ಮಠ ಮಾಹಿತಿ ನೀಡಿದೆ.

ಮಾವುತ ಮಹಮ್ಮದ್ ನ ಪ್ರಕಾರ ಆನೆ ಆರೋಗ್ಯವಾಗಿದೆ ಮತ್ತು ಬೆದೆಯ ಕಾಲ ಇದಲ್ಲ. ಮದ ಬಂದ ಗಂಡಾನೆಯ ಮದ ಇಳಿಸುವ ಸಂದರ್ಭ ಕ್ರಾಸಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ. ಆನೆಯನ್ನು ಪರ್ಮನೆಂಟಾಗಿ ಹೊನ್ನಾಳಿಯಲ್ಲೇ ಇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯಿದೆ. ಅನಾರೋಗ್ಯದಿಂದ ಇರುವ ಆನೆಯನ್ನು ಮಠದಲ್ಲಿ ಉಳಿಸಿಕೊಂಡರೆ ಕಾನೂನು ಸಂಕಟ ಎದುರಿಸಬೇಕಾಗಿದಿತು ಎಂದು ಕೃಷ್ಣಮಠ ಹೊನ್ನಾಳಿಗೆ ದಾಟಿಸಿದೆ ಎಂದೂ ಹೇಳಲಾಗಿದೆ. ಉಡುಪಿ ಕೃಷ್ಣಮಠದ ಪರ್ಯಾಯ ಪಲಿಮಾರು ಮಠ ಇದಕ್ಕೆ ಸ್ಪಷ್ಟನೆ ಕೊಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *