ನೂತನ ಅಧ್ಯಕ್ಷರನ್ನ ನೇಮಕ ಮಾಡಿ – ‘ಕೈ’ ವರಿಷ್ಠರಿಗೆ ರಾಹುಲ್ ಖಡಕ್ ಮಾತು

Public TV
1 Min Read
rahul gandhi 3

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸೋತು ಮುಖಭಂಗಕ್ಕೆ ಒಳಗಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂಬ ಮಾಹಿತಿ ಲಭಿಸಿದೆ.

ಪಕ್ಷಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್ ಪಕ್ಷದ ಇಬ್ಬರು ಪ್ರತಿನಿಧಿಗಳಿಗೆ ರಾಹುಲ್ ಸಂದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೊಸದಾಗಿ ಲೋಕಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್ ಪಕ್ಷದ ಸಂಸದರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಒಪ್ಪಿಗೆ ನೀಡಿಲ್ಲ ಎನ್ನಲಾಗಿದ್ದು, ಪಕ್ಷದ ಎಲ್ಲಾ ಸಭೆ ಹಾಗೂ ಭೇಟಿಗಳನ್ನು ರದ್ದು ಮಾಡಿದ್ದರು. ಆದರೂ ರಾಹುಲ್ ಹೊಸ ಸಂಸದರನ್ನ ಭೇಟಿ ಮಾಡಿದ್ದರು ಎನ್ನಲಾಗಿದೆ.

rahul gandhi a

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಅಹ್ಮದ್ ಪಟೇಲ್ ಹಾಗೂ ಕೆಸಿ ವೇಣುಗೋಪಾಲ್ ಅವರಿಗೆ ರಾಹುಲ್ ಸಂದೇಶ ನೀಡಿ, ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಕಾರ್ಯಕಾರಿ ಸಭೆಯಲ್ಲಿ ತಮ್ಮ ರಾಜೀನಾಮೆ ಕುರಿತು ರಾಹುಲ್ ಪ್ರಸ್ತಾಪ ಮಾಡಿದ್ದ ವೇಳೆ ಕಾಂಗ್ರೆಸ್ ನಾಯಕರು ಹಾಗೂ ಸೋನಿಯಾ, ಪ್ರಿಯಾಂಕ ಗಾಂಧಿ ಮನವೊಲಿಸಿದ್ದರು. ಪಕ್ಷ ಮುಖಂಡರು ಕೂಡ ರಾಹುಲ್ ರಾಜೀನಾಮೆ ತೀರ್ಮಾನವನ್ನು ತಿರಸ್ಕರಿಸಿದ್ದರು.

ನೆಹರು ಅವರ ಪುಣ್ಯ ತಿಥಿ ದಿನದಂದೇ ರಾಹುಲ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ರಾಹುಲ್ ಅವರಿಗೆ ತಿಳಿ ಹೇಳುವ ಕಾರ್ಯವನ್ನು ಮಾಡಿದ್ದ ಸೋನಿಯಾ, ಹಾಗೂ ಪ್ರಿಯಾಂಕ ಗಾಂಧಿ ಅವರು ಕೆಲ ಸಮಯ ವಿಶ್ರಾಂತಿ ಪಡೆಯುವಂತೆ ಸಲಹೆಯನ್ನು ನೀಡಿದ್ದರು. ಅಲ್ಲದೇ ಈ ಸಮಯದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ತಿಳಿಸಿದ್ದರು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *