ಚೆನ್ನೈ: ಮತ ಚಲಾವಣೆಗೆ ಆಗಮಿಸಿದ್ದ ಇಬ್ಬರು ಮತದಾರರು ಮತಗಟ್ಟೆಯಲ್ಲಿ ಸಾವನ್ನಪ್ಪಿದ್ದಾರೆ. ಈರೋಡ್ ಮತ್ತು ಸೇಲಂ ಲೋಕಸಭಾ ಕ್ಷೇತ್ರಗಳಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಮುರುಗೇಸನ್ (60) ಮತ್ತು ಕೃಷ್ಣನ್ (75) ಎಂದು ಗುರುತಿಸಲಾಗಿದೆ. ಈರೋಡ್ ಲೋಕಸಭಾ ಕ್ಷೇತ್ರದ ಶಿವಗಿರಿ ಮತಗಟ್ಟೆಯಲ್ಲಿ ಮುರುಗೇಸನ್, ಸೇಲಂ ಲೋಕಸಭಾ ಕ್ಷೇತ್ರದ ಒಮಲೂರು ಮತಗಟ್ಟೆಯಲ್ಲಿ ಕೃಷ್ಣನ್ ಮೃತಪಟ್ಟಿದ್ದಾರೆ.
ಶಿವಗಿರಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ನೂರಕ್ಕೂ ಅಧಿಕ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ವಯೋಸಹಜವಾಗಿ ಬಿಸಿಲಿನಲ್ಲಿ ನಿಂತಿದ್ದ ಮುರುಗೇಸನ್ ಸುಸ್ತಾದಂತೆ ಕಂಡು ಬಂದಿದ್ದಾರೆ. ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ಇರೋಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮುರುಗೇಸನ್ ಅವರನ್ನು ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ಖಚಿತ ಪಡಿಸಿದ್ದಾರೆ.
ಈ ಸಂಬಂಧ ಶಿವಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ. ಮತ ಚಲಾಯಿಸಿ ಹೊರ ಬಂದ ಕೃಷ್ಣನ್ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.