ಗಾಂಧಿನಗರ: ಸಾಮಾನ್ಯವಾಗಿ ಮದುವೆಯಾಗಿ ಒಂದು ವರ್ಷ ಅಥವಾ ಕೆಲವು ತಿಂಗಳ ನಂತರ ದಂಪತಿ ವಿಚ್ಛೇದನ ತೆಗೆದುಕೊಳ್ಳುತ್ತಾರೆ. ಆದರೆ ಗುಜರಾತ್ ರಾಜ್ಯದಲ್ಲಿ ಮದುವೆಯಾದ ದಿನವೇ ನವಜೋಡಿ ವಿಚ್ಛೇದನ ಪಡೆದುಕೊಂಡಿದೆ.
ಈ ಘಟನೆ ರಾಜಕೋಟ್ ಜಿಲ್ಲೆಯ ಗೊಂಡಾಲ್ ನಲ್ಲಿ ನಡೆದಿದೆ. ನವಜೋಡಿ ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಸಪ್ತಪದಿ ತುಳಿದಿದ್ದರು. ನವಜೋಡಿಗೆ ಸ್ನೇಹಿತರು, ಸಂಬಂಧಿಕರು ಉಡುಗೊರೆ ಕೊಟ್ಟು ಶುಭಾಶಯ ತಿಳಿಸಿದ್ದರು. ಎಲ್ಲ ಕಾರ್ಯಕ್ರಮ ಮುಗಿದ ನಂತರ ನವಜೋಡಿ ಊಟಕ್ಕೆ ಹೋಗಿದ್ದಾರೆ. ಈ ವೇಳೆ ಊಟದ ವಿಚಾರವಾಗಿ ವಧು ಹಾಗೂ ವರನ ಕಡೆಯವರ ಮಧ್ಯೆ ಜಗಳ ಉಂಟಾಗಿದೆ.
ಜಗಳ ವಿಕೋಪಕ್ಕೆ ತಿರುಗಿ ಎರಡೂ ಕುಟುಂಬಸ್ಥರ ನಡುವೆ ವಾದ-ವಿವಾದ ನಡೆದಿದೆ. ಅಷ್ಟಕ್ಕೂ ಸುಮ್ಮನಾಗದ ಅವರು ಪರಸ್ಪರ ಊಟವನ್ನು ಎಸೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಒಬ್ಬೊಬ್ಬರ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ಕೊನೆಗೆ ಮದುವೆ ಮಂಟಪದಲ್ಲಿದ್ದವರು ಇವರ ಗಲಾಟೆ ನೋಡಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಎರಡು ಕುಟುಂಬಸ್ಥರಿಗೆ ಸಮಾಧಾನ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ವಧು-ವರನ ಕಡೆಯವರು ತಮ್ಮ ತಮ್ಮ ವಕೀಲರನ್ನು ಕರೆಯಿಸಿ ಸ್ಥಳದಲ್ಲಿಯೇ ಕೆಲವು ನಿಮಿಷಗಳಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೇ ಸಮಾರಂಭದಲ್ಲಿ ನವಜೋಡಿಗೆ ಬಂದಿದ್ದ ಉಡುಗೊರೆಗಳನ್ನು ಸಹ ಎರಡು ಕುಟುಂಬಸ್ಥರು ಹಿಂದಿರುಗಿಸಿ ಮನೆಗೆ ತೆರಳಿದ್ದಾರೆ. ವರನ ಕುಟುಂಬವು 250 ಕಿಲೋಮೀಟರ್ ದೂರದಲ್ಲಿರುವ ಖೇಡಾದಿಂದ ಮದುವೆಗೆಂದು ಗೊಂಡಾಲ್ ಗೆ ಬಂದಿತ್ತು. ಕೊನೆಗೆ ಅಲ್ಲಿಯೇ ಮದುವೆ ನಡೆದು ಅಲ್ಲಿಯೇ ವಿಚ್ಛೇದನದ ಮೂಲಕ ಕೊನೆಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv