ನವದೆಹಲಿ: ಆರ್ಥಿಕ ಸಮಸ್ಯೆಗೆ ಹೆದರಿ ತನ್ನ ಏಳು ತಿಂಗಳ ಕಂದಮ್ಮನನ್ನು ಕೊಂದು ಸಹಜ ಸಾವು ಎಂದು ಸಾಬೀತು ಪಡಿಸಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆದಿಬಾ ಎಂಬವಳೇ ಮಗುವನ್ನು ಕೊಂದ ಪಾಪಿ ತಾಯಿ. ಮಗುವಿನ ತಂದೆ ಇಸ್ರೇಲ್ ಖಾನ್ ಮತ್ತು ಆದಿಬಾ ಮಲ್ಚಾಂಡ್ ಆಸ್ಪತ್ರೆಗೆ ಮೃತಪಟ್ಟ ಮಗುವನ್ನು ಕರೆತರುತ್ತಾರೆ. ಆಗಸ್ಟ್ 20 ರಂದು ಹಳ್ರಾತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಮಗು ಮೃತಪಟ್ಟಿರುವುದು ತಿಳಿದು, ವಿಚಾರಿಸಿದಾಗ ಮಗು ಬಕೆಟ್ ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಪೋಷಕರು ಹೇಳುತ್ತಾರೆ.
ಮಗುವಿನ ಕುತ್ತಿಗೆಯ ಭಾಗದಲ್ಲಿ ಅನುಮಾನಸ್ಪದ ಗುರುತುಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಮರಣೋತ್ತರ ಪರೀಕ್ಷೆಗಾಗಿ ಮಗುವಿನ ದೇಹವನ್ನು ಆಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ (ಏಮ್ಸ್)ಗೆ ಕಳುಹಿಸಲಾಗಿತ್ತು.
ಆಗಸ್ಟ್ 27 ರಂದು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಕತ್ತಿನ ಭಾಗಕ್ಕೆ ಮಾರಣಾಂತಿಕ ಒತ್ತಡ ಉಂಟಾಗಿದೆ. ಅಲ್ಲದೇ ಮೃತ ದೇಹದ ಆಂತರಿಕ ಭಾಗಗಳಲ್ಲಿ ಯಾವುದೇ ನೀರು ತುಂಬಿರಲಿಲ್ಲ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಪೊಲೀಸರು ಮನೆಯ ಸ್ನಾನದ ಕೋಣೆಯನ್ನು ಪರಿಶೀಲಿಸಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದ್ದ ಬಕೆಟ್ ವಶಪಡಿಸಿಕೊಂಡಿದ್ದರು. ಆದಿಬಾ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿತ್ತು ಎಂಬುವುದು ಬೆಳಕಿಗೆ ಬಂದಿತ್ತು.
ಕೊಲೆ ಮಾಡಿದ್ದು ಯಾಕೆ..?
ಅನುಮಾನದ ಆಧಾರದ ಮೇಲೆ ಆದಿಬಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮಗು ಹುಟ್ಟಿದಾಗಿನಿಂದಲೂ ಅನಾರೋಗ ಪೀಡಿತವಾಗಿತ್ತು. ಮಗುವಿನ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿತ್ತು. ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮಗುವನ್ನೇ ಕೊಲೆ ಮಾಡಲು ನಿರ್ಧರಿದ್ದಾಳೆ. ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಲಗಿದ್ದ ಮಗುವನ್ನು ತನ್ನ ದುಪ್ಪಟದ ಸಹಾಯದಿಂದ ಮಗುವನ್ನು ಕೊಲೆ ಮಾಡಿದ್ದಾಳೆ. ಮೃತಪಟ್ಟ ಮಗುವಿನ ದೇಹವನ್ನು ಬಕೆಟ್ ನಲ್ಲಿ ಹಾಕಿ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಮೃತ ದೇಹವನ್ನು ತೆಗೆದು ಹಾಸಿಗೆ ಮೇಲೆ ಮಲಗಿಸಿ ಪತಿಗೆ ವಿಷಯವನ್ನು ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದರು.
ಸದ್ಯಕ್ಕೆ ಪೊಲೀಸರು ಆರೋಪಿ ಆದಿಬಾಳನ್ನು ಬಂಧಿಸಿದ್ದು, ಕೊಲೆ ಮಾಡಲು ಬಳಸಿದ್ದ ದುಪ್ಪಟವನ್ನು ವಶಪಡಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv