ಲಕ್ನೋ: ಮದುವೆಯಾಗಬೇಕೆಂದು ವ್ಯಕ್ತಿಯೊಬ್ಬ ಮಾಂತ್ರಿಕನ ಮಾತು ಕೇಳಿ ಮೊಬೈಲ್ ಕೀ, ವೈರ್ ಹಾಗೂ ಇನ್ನಿತರೆ ವಸ್ತುಗಳನ್ನು ನುಂಗಿದ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ಅಜಯ್ ದ್ವಿವೇದಿ(42) ಮೊಬೈಲ್ ನುಂಗಿದ ವ್ಯಕ್ತಿ. ಅನಾರೋಗ್ಯ ಸಮಸ್ಯೆ ಆತನ ಮದುವೆಗೆ ಅಡ್ಡಿಯಾಗಿತ್ತು. ನನಗೆ ಅನಾರೋಗ್ಯ ಉಂಟಾಗಲು ಯಾರೋ ಮಾಟಮಂತ್ರ ಮಾಡಿಸಿದ್ದಾರೆಂದು ಮಾಂತ್ರಿಕನ ಹತ್ತಿರ ಸಲಹೆ ಪಡೆಯಲು ಹೋಗಿದ್ದಾನೆ.
ಅಜಯ್ ಮಾಂತ್ರಿಕನ ಹತ್ತಿರ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ. ಆಗ ಮಾಂತ್ರಿಕ ಆತನಿಗೆ ಕೀ, ಬ್ಯಾಟರಿ, ಚೂಪಾದ ವೈರ್, ಗ್ಲಾಸ್ ಹಾಗೂ ಇತರೆ ವಸ್ತುಗಳನ್ನು ನುಂಗಲು ಹೇಳಿದ್ದಾನೆ. ಮಾಂತ್ರಿಕನ ಸಲಹೆಯನ್ನು ಅಜಯ್ ಒಪ್ಪಿಕೊಂಡಿದ್ದಾನೆ.
ಅಜಯ್ ಮಾಂತ್ರಿಕ ಹೇಳಿದ್ದ ಆ ವಸ್ತುಗಳನ್ನು ನುಂಗಿದ್ದಾನೆ. ಇದಾದ ಬಳಿಕ ಹೊಟ್ಟೆ ನೋವು ಉಂಟಾಗಿ ಆತ ಖಾಸಗಿ ಆಸ್ಪತ್ರೆಗೆ ಹೋಗಿದ್ದಾನೆ. ವೈದ್ಯರು ಆತನಿಗೆ ಎಕ್ಸ್-ರೇ ತೆಗೆಸಲು ಹೇಳಿದ್ದಾರೆ. ಅಜಯ್ ಎಕ್ಸ್-ರೇ ರಿಪೋರ್ಟ್ ನೋಡಿ ವೈದ್ಯರು ದಂಗಾಗಿ ಹೋಗಿದ್ದಾರೆ.
ಲೋಹದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು. ಶಸ್ತ್ರಚಿಕಿತ್ಸೆ ಮಾಡಿ ಅಜಯ್ ದೇಹದಲ್ಲಿದ್ದ ಲೋಹದ ವಸ್ತುಗಳನ್ನು ವೈದ್ಯರು ಈಗ ಹೊರತೆಗೆದಿದ್ದಾರೆ.