ಸ್ಯಾಂಡಲ್‍ವುಡ್ ನಟಿ ಚೈತ್ರಾ ಪೋತರಾಜ್ ಸಂಸಾರದಲ್ಲಿ ಬಿರುಕು- ಲವ್ ಮಾಡಿ ಮದ್ವೆಯಾಗಿದ್ದ ಜೋಡಿ ವಿಚ್ಛೇದನಕ್ಕೆ ತಯಾರಿ

Public TV
2 Min Read
CHAITHRA POTHRAJ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಚೈತ್ರಾ ಪೋತರಾಜ್ ಸಂಸಾರದಲ್ಲಿ ಬಿರುಕು ಮೂಡಿದ್ದು, ಲವ್ ಮಾಡಿ ಮದುವೆಯಾಗಿದ್ದ ಜೋಡಿ ಇದೀಗ ವಿಚ್ಛೇದನಕ್ಕೆ ತಯಾರಿ ನಡೆಸುತ್ತಿದ್ದಾರೆ.

ಚೈತ್ರಾಗೆ ಲಿಕ್ಕರ್ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾದ ಬಾಲಾಜಿ ಪೋತರಾಜ್ ಅವರ ಪರಿಚಯವಾಗಿ, ಡಿಸೆಂಬರ್ 12, 2006ರಂದು ಮೈಸೂರಿನ ಚಾಮುಂಡೇಶ್ವರಿ ಸ್ಟೇಡಿಯಂನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಬಾಲಾಜಿ ಹಾಗೂ ಚೈತ್ರಾಗೆ 2 ಮುದ್ದಾದ ಮಕ್ಕಳಿದ್ದಾರೆ. ಚೈತ್ರಾ ಸಿನಿಮಾ ನಟಿಯಾಗಿದ್ದರಿಂದ ಪತಿ ಬಾಲಾಜಿ ತನ್ನ ಮೇಲೆ ಅನುಮಾನ ಪಡುತ್ತಿದ್ದರು. ಎಲ್ಲಿಗೆ ಹೋದರೂ ಜೊತೆಗೆ ಗನ್ ಮ್ಯಾನ್ ನನ್ನ ಕಳುಹಿಸುತ್ತಿದ್ದರು ಎಂದು ಚೈತ್ರಾ ಆರೋಪಿಸಿದ್ದಾರೆ.

CHAITHRA POTHRAJ 2

ಮದುವೆಯ ನಂತರ ಬಾಲಾಜಿ ನನಗೆ ಪ್ರತಿದಿನ ಹೊಡೆದು, ಬೈದು ಚಿಕ್ಕಪುಟ್ಟ ವಿಷಯಗಳಿಗೆ ಕಿರುಕುಳ ನೀಡುತ್ತಿದ್ದರು. ನನಗೆ ಎರಡನೇ ಮಗುವಾದ ನಂತರ ನಾನು ಅವರ ಜೊತೆ ಯಾವುದೇ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿಲ್ಲ. ಬಾಲಾಜಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದರು. ಅಷ್ಟೇ ಅಲ್ಲದೇ ನಾನು ತವರು ಮನೆಗೆ ಹೋಗಬೇಕೆಂದರೆ ಅವರು ನನ್ನ ಜೊತೆ ಗನ್‍ಮ್ಯಾನ್ ಕಳುಹಿಸುತ್ತಿದ್ದರು. ನನ್ನ ಖರ್ಚಿಗೆ ಹಣ ಕೇಳಿದರೆ ಬಾಲಾಜಿ ನನ್ನನ್ನು ಹೊಡೆದು ಅಮಾನವೀಯವಾಗಿ ವರ್ತಿಸುತ್ತಿದ್ದರು ಎಂದು ನಟಿ ಚೈತ್ರಾ ದೂರಿನಲ್ಲಿ ತಿಳಿಸಿದ್ದಾರೆ.

CHAITHRA POTHRAJ 3

ಸಿನಿಮಾಗಳಲ್ಲಿ ನಾನು ನಟಿಸಬಾರದು ಎಂದು ಹೇಳಿದ್ದರಿಂದ ನನ್ನ ತವರು ಮನೆಯವರ ಸಹಾಯದಿಂದ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಆದರೆ ಧಾರವಾಹಿಯಿಂದ ಬಂದ ಹಣವನ್ನು ಕೂಡ ಬಾಲಾಜಿ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ನಾನು ಬಾಲಾಜಿ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ನಮ್ಮಿಬ್ಬರ ನಡುವೆ ಗಲಾಟೆ ಆಗಿದ್ದು, ಆಗ ಬಾಲಾಜಿ ನನ್ನ ತಲೆಯನ್ನು ಕಾರಿನ ಕಿಟಕಿಗೆ ಡಿಕ್ಕಿ ಹೊಡೆಸಿದ್ದರು. ಆಗ ನನ್ನ ತಲೆ ಬುರುಡೆ ತೆರೆದುಕೊಂಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೆ ಎಂದು ಚೈತ್ರಾ ಹೇಳಿದ್ದಾರೆ.

CHAITHRA POTHRAJ 4

ನಂತರ ಮತ್ತೆ ಮಾರ್ಚ್ 14ರಂದು ಚಿಕ್ಕ ವಿಷಯಕ್ಕೆ ಜಗಳ ತೆಗೆದು ಮುಖಕ್ಕೆ ಹೊಡೆದು ತಲೆ ಕೂದಲನ್ನು ಹಿಡಿದು ಗೋಡೆಗೆ ಡಿಕ್ಕಿ ಹೊಡೆಸಿದ್ದರು. ಆ ಹೊಡೆತದಿಂದ ನನ್ನ ಮೂಗು ಮತ್ತು ಬಾಯಿಂದ ರಕ್ತ ಬಂದು ಎಡಗಣ್ಣಿನ ಕೆಳಗೆ ಗಾಯವಾಯಿತು. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಹಿಡಿದು ಹೊಟ್ಟೆಯ ಭಾಗಕ್ಕೆ ಹೊಡೆದಿದ್ದಾರೆ. ನಾನು ಪ್ರಜ್ಞೆ ತಪ್ಪಿದ್ದರೂ ಚಿಕಿತ್ಸೆ ಕೊಡಿಸದೇ ಬಾಲಾಜಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಚೈತ್ರಾ ದೂರಿದ್ದಾರೆ.

CHAITHRA POTHRAJ 5

ಬಾಲಾಜಿ ಅಮೂಲ್ಯ ಎಂಬ ಹುಡುಗಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನನ್ನನ್ನು ಮನೆಯಿಂದ ಹೊರಹಾಕುವ ಉದ್ದೇಶದಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಸದ್ಯ ನಾನು ಈಗ ತವರು ಮನೆಯಲ್ಲಿದ್ದು, ಬಾಲಾಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚೈತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತಿಯ ವಿರುದ್ಧ ಚೈತ್ರಾ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *