ಬೆಂಗಳೂರು: ಆಹಾರ ಸಿಗದ ಹಾವೊಂದು ಮತ್ತೊಂದು ಹಾವನ್ನ ಬೇಟೆಯಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೋಟದ ಮನೆಯೊಂದರ ಬಳಿ ನಡೆದಿದೆ.
ನಾಗರ ಹಾವು ಮಂಡಲದ ಹಾವನ್ನು ನುಂಗುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಜನರು ಎಂತಹ ಕಾಲ ಬಂತಪ್ಪ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಹೊಟ್ಟೆ ಹಸಿವಿನಿಂದಾಗಿ ನಾಗರಹಾವೊಂದು ನಾಯಿ ಮರಿಯನ್ನು ನುಂಗಲು ಯತ್ನಿಸಿದ ಘಟನೆ ಧಾರವಾಡದ ವೀರಭದ್ರೇಶ್ವರ ನಗರದಲ್ಲಿ ನಡೆದಿತ್ತು. ನಗರದ ಶೇಖರ ಬಿಜಲಿ ಎಂಬವರ ಮನೆ ಬಳಿ ನಾಗರಹಾವು ನಾಯಿ ಮರಿಯನ್ನ ನುಂಗಲು ಯತ್ನ ನಡೆಸಿತ್ತು. ಮರದ ಸೌದೆ ಕೆಳಗೆ ನಾಯಿ ಮರಿಗಳ ಗುಂಪು ವಾಸವಿತ್ತು. ಅಲ್ಲೇ ಪಕ್ಕದಲ್ಲಿದ್ದ ನಾಗರಹಾವೊಂದು ಅವುಗಳ ಬಳಿ ಹೋಗಿ ಹಸಿವಿನಿಂದ ನಾಯಿ ಮರಿಯನ್ನು ತಿನ್ನಲು ಯತ್ನಿಸಿದ್ದು, ಒಂದು ನಾಯಿಮರಿಯನ್ನು ಹಿಡಿದುಕೊಂಡಿತ್ತು. ಇದನ್ನ ನೋಡಿದ ಶೇಖರ್ ತಕ್ಷಣ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ಎಲ್ಲಪ್ಪ ಬರುವಷ್ಟರಲ್ಲಿ ನಾಗರಹಾವು ನಾಯಿಮರಿಯನ್ನ ಅರ್ಧದಷ್ಟು ನುಂಗಿತ್ತು. ಸ್ಥಳಕ್ಕೆ ಬಂದ ಎಲ್ಲಪ್ಪ ನಾಯಿ ಮರಿ ನುಂಗಿದ್ದ ನಾಗರ ಹಾವನ್ನ ಹಿಡಿದು, ಆ ನಾರಿಮರಿಯನ್ನ ನಾಗರ ಹಾವಿನ ಬಾಯಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಾಯಿ ಮರಿ ಅಷ್ಟೊತ್ತಿಗೆ ಸಾವನ್ನಪ್ಪಿತ್ತು.