ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಮಾದಲ್ಲಿನ ಸಿಆರ್ಪಿಎಫ್ ತರಬೇತಿ ಕೇಂದ್ರದ ಮೇಲೆ ಮಧ್ಯರಾತ್ರಿ ಉಗ್ರರು ದಾಳಿ ನಡೆಸಿದ ಪರಿಣಾಮ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಉಗ್ರರನ್ನು ಯೋಧರು ಸದೆಬಡಿದಿದ್ದಾರೆ
ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. 4 ದಿನಗಳ ಹಿಂದೆ ಇದೇ ಜಿಲ್ಲೆಯಲ್ಲಿ ಜೈಷ್ ಉಗ್ರ ನೂರ್ ಮಹಮ್ಮದ್ ತಂತ್ರೇನನ್ನು ಎನ್ಕೌಂಟರ್ ಮಾಡಲಾಗಿತ್ತು. ನವೆಂಬರ್ನಲ್ಲಿ ಇದೇ ತಂಡದ ಮೂವರು ಉಗ್ರರನನ್ನು ಹತ್ಯೆ ಮಾಡಲಾಗಿತ್ತು. ಅವರಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಸಝರ್ನ ಸಂಬಂಧಿಯೂ ಒಬ್ಬನಾಗಿದ್ದ.
ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಉಗ್ರರು ಸಿಆರ್ಪಿಎಫ್ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ತರಬೇತಿ ಕೇಂದ್ರದ 185ನೇ ಬೆಟಾಲಿಯನ್ನ ಆವರಣದೊಳಗೆ ನುಗ್ಗುವ ಮುನ್ನ ಗ್ರೆನೇಡ್ ಎಸೆದು ಗುಂಡಿನ ದಾಳಿ ಆರಂಭಿಸಿದ್ದರು ಸ್ಟೇಷನ್ನಲ್ಲಿ ಎಷ್ಟು ಮಂದಿ ಸಿಆರ್ಪಿಎಫ್ ಯೊಧರನ್ನು ನಿಯೋಜಿಸಲಾಗಿತ್ತು ಎಂಬುದು ತಿಳಿದುಬಂದಿಲ್ಲ. ಆದ್ರೆ ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆ ಶುರು ಮಾಡಲಾಯ್ತು.
ಶೂಟೌಟ್ನ ಆರಂಭಿಕ ಗಂಟೆಗಳಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಶರೀಫ್ ಉದ್ ದಿನ್ ಗನಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ರು. ನಂತರ ಎನ್ಕೌಂಟರ್ನಲ್ಲಿ ಯೋಧರಾದ ರಾಜೇಂದ್ರ ನೇನ್, ಪಿಕೆ ಪಾಂಡಾ ಬಲಿಯಾದ್ರು. ಕಟ್ಟಡದೊಳಗೆ ಸಿಲುಕಿದ್ದ ಅಧಿಕಾರಿ ಕುಲ್ದೀಪ್ ರೈ ಹೃದಯಾಘಾತದಿಂದ ಸಾವನ್ನಪ್ಪಿದ್ರು.
ಉಗ್ರರು ಸಿಆರ್ಪಿಎಫ್ ಕೇಂದ್ರವನ್ನು ಟಾರ್ಗೆಟ್ ಮಾಡಿದ್ದಾರೆಂಬ ಎಚ್ಚರಿಕೆಯ ಮಧ್ಯೆಯೂ ಈ ದಾಳಿ ನಡೆಸಿದೆ. ದಾಳಿ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಕಳೆದ 2-3 ದಿನಗಳಿಂದ ಉಗ್ರರು ದಾಳಿಗೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಮುಂಚೆ ಅವರಿಗೆ ಸೂಕ್ತ ಸ್ಥಳ ಹಾಗೂ ಸಮಯ ಸಿಕ್ಕಿರಲಿಲ್ಲ. ಹೀಗಾಗಿ ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್ಪಿ ವೈದ್ ಹೇಳಿದ್ದಾರೆ.