ಬೆಂಗಳೂರು: ನಗರದಲ್ಲಿ ನಡೆದ ಉದ್ಯಮಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಹಣ ಪಡೆದು ಕಾರು ಕೊಡಿಸುವುದಾಗಿ ಹೇಳಿದ್ದ ಉದ್ಯಮಿ ನವೀನ್ ರನ್ನು ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿ ನಾಗ ಅಲಿಯಾಸ್ ಗೆಡ್ಡ ನಾಗರಾಜ್, ಮೊಹಮ್ಮದ್ ಅಮೀರ್, ಪ್ರಕಾಶ್ ಹಾಗೂ ರಘು ಬಂಧಿತ ಆರೋಪಿಗಳು. ರೌಡಿ ನಾಗ 26 ಲಕ್ಷ ಹಣವನ್ನು ಉದ್ಯಮಿ ನವೀನ್ ಗೆ ನೀಡಿದ್ದ. ಕಾರ್ ಕೊಡಿಸುವುದಾಗಿ ಹೇಳಿ ನವೀನ್ ಹಣ ಪಡೆದಿದ್ದರು. ಆದರೆ ನವೀನ್ ಕಾರ್ ಕೊಡಿಸದೇ ಹಣವನ್ನೂ ಕೊಡದೇ ಸತಾಯಿಸುತ್ತಿದ್ದರು. ಹೀಗಾಗಿ ಕಳೆದ ಶುಕ್ರವಾರ ಉದ್ಯಮಿ ಕಂ ಕಾರ್ ಡಿಲರ್ ನವೀನ್ ರನ್ನು ಅಪಹರಣ ಮಾಡಿದ್ದರು.
ಈ ಘಟನೆಯ ಬಳಿಕ ನವೀನ್ ಪತ್ನಿ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ರೌಡಿ ನಾಗನ ತಂಡವು ನವೀನ್ ರನ್ನು ಅಪಹರಿಸಿ ರಾಮಮೂರ್ತಿನಗರದಲ್ಲಿ ಇಟ್ಟುಕೊಂಡಿದ್ದರು ಎಂಬುದು ಗೊತ್ತಾಗಿತ್ತು. ಇದೀಗ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.