ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟಿದ್ದಾರೆ. ಈಗಾಗಲೇ ಎಂಎಲ್ಎ ಚಿತ್ರದಲ್ಲಿ ನಿರತರಾಗಿದ್ದು, ಜನ ಆಸೆ ಪಟ್ಟರೆ ಮುಂದಿನ ದಿನಗಳಲ್ಲಿ ಸಮಯ ಸಂದರ್ಭ ನೋಡಿಕೊಂಡು ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಥಮ್ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಹೇಳಿದ್ದಾರೆ.
ಬುಧವಾರ ರಾತ್ರಿ ಪಟ್ಟಣದಲ್ಲಿ ಅದ್ಧೂರಿಯಾಗಿ ಗಣೇಶ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಥಮ್ ಧಾರ್ಮಿಕ ಕಾರ್ಯಕ್ರಮಗಳಿಗೆ ಮೊದಲಿನಿಂದಲ್ಲೂ ನಾನು ಭೇಟಿ ನೀಡುತ್ತಿದ್ದೇನೆ. ಹಾಗಾಗಿ ಸಿದ್ಧಿ ಬುದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಂದಿದ್ದು ಖುಷಿಯಾಗಿದೆ ಎಂದು ಹೇಳಿದ್ರು.
ಇನ್ನೂ ನನಗೆ ಯಾರು ಅಭಿಮಾನಿಗಳಿಲ್ಲ ಎಲ್ಲಾರು ನನಗೆ ಹಿತೈಷಿಗಳಿದ್ದಾರೆ. ವಿವೇಕಾನಂದ, ವಿಶ್ವೇಶ್ವರಯ್ಯ, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ ಅಂತಹ ದೊಡ್ಡ ಸಾಧಕರಿಗೆ ಅಭಿಮಾನಿಗಳಿದ್ದಾರೆ. ಈಗಾಗಲೇ ಬಿಗ್ ಬಾಸ್ ಬಳಿಕ ನಾಲ್ಕು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದೇನೆ ಎಂದು ತಿಳಿಸಿದ್ರು.
ಇನ್ನೂ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ನಿರ್ಧಿಷ್ಟವಾದ ಸಮಯ ಬರುತ್ತೆ ಆಗ ಮಾತನಾಡುತ್ತೇನೆ ಎಂದು ಪ್ರಥಮ್ ಉತ್ತರಿಸಿದ್ದರು. ರವಿ ಕಾಣದನ್ನು ಕವಿ ಕಾಣುತ್ತಾನೆ ಇವರಿಬ್ಬರೂ ಕಾಣದನ್ನು ಮಾಧ್ಯಮದವರು ಕಾಣುತ್ತಾರೆ ನಿಮ್ಮ ಕಣ್ಣು ತಪ್ಪಿಸಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಪ್ರಥಮ್ ತಿಳಿಸಿದ್ರು.
ಮುಂದಿನ ದಿನಗಳಲ್ಲಿ ಜನ ಆಸೆ ಪಟ್ಟರೆ ತೀರ್ಮಾನ ತೆಗೆದುಕೊಳ್ಳುತ್ತೇನೆ, ಅತೀ ಶೀಘ್ರದಲ್ಲೇ ಎಲ್ಲವೂ ಗೊತ್ತಾಗುತ್ತದೆ. ಸದ್ಯಕ್ಕೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದರು. ಏನೇ ಆದರೂ ಒಳ್ಳೆ ಹುಡುಗ ಪ್ರಥಮ್ ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡುವುದು ಖಚಿತವಾಗಿದೆ.