ರಾಮನಗರ: ಬಿಡದಿ ಟೌನ್ಶಿಪ್ (Bidadi Township) ವಿರುದ್ಧ ಕೃಷಿ ಭೂಮಿ ಉಳಿಸಿಕೊಳ್ಳಲು ರೈತರು ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಇದೀಗ ದೇಶ-ವಿದೇಶಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಯೋಜನೆ ವಿರೋಧಿಸಿ ಆರಂಭಿಸಲಾಗಿರುವ ʻಸೇವ್ ಬಿಡದಿʼ ಆನ್ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ (Online Campaign) ಈವರೆಗೆ ಬರೋಬ್ಬರಿ 71,000 ಕ್ಕೂ ಹೆಚ್ಚು ಜನರು ಸಹಿ ಮಾಡುವ ಮೂಲಕ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.

ತಮ್ಮ ಜಮೀನನ್ನು ಉಳಿಸಿಕೊಳ್ಳಲು ಬಿಡದಿ ಭಾಗದ ರೈತರು (Farmers) ಟೌನ್ಶಿಪ್ ವಿರುದ್ಧ ಸತತ 500ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ʻಸೇವ್ ಬಿಡದಿʼ ಅಭಿಯಾನವು ಕೇವಲ ಸ್ಥಳೀಯ ಮಟ್ಟಕ್ಕಷ್ಟೇ ಸೀಮಿತವಾಗಿರದೇ, ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಕೃಷಿ ಪ್ರೇಮಿಗಳಿಂದ ವ್ಯಾಪಕ ಬೆಂಬಲ ಪಡೆದುಕೊಂಡಿದೆ.

ಕೃಷಿ ಭೂಮಿಯನ್ನ ಯಾವುದೇ ಕಾರಣಕ್ಕೂ ಟೌನ್ಶಿಪ್ ಯೋಜನೆಗೆ ಬಿಟ್ಟುಕೊಡುವುದಿಲ್ಲ. ಸರ್ಕಾರ ತಕ್ಷಣವೇ ಈ ಯೋಜನೆಯನ್ನ ಕೈಬಿಟ್ಟು ರೈತರ ಹಿತ ಕಾಯಬೇಕು ಎಂದು ಹೋರಾಟನಿರತ ರೈತರು ಆಗ್ರಹಿಸಿದ್ದಾರೆ.
