– ಕೊಲೆಯಲ್ಲಿ ಮತ್ತಷ್ಟು ಜನರ ಬಂಧನ ಸಾಧ್ಯತೆ
– ಮನೆಗೆ ನುಗ್ಗಿ ಕೈ ನಾಯಕನನ್ನು ಹತೈಗೈದಿದ್ದ ಪಾತಕಿಗಳು
ಧಾರವಾಡ: ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ (Fairoz Pathan) ಹತ್ಯೆಗೆ ಸಂಬಂಧಿಸಿದಂತೆ ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಮೈನುದ್ದಿನ್ ನದಾಫ್, ಸಾಗರ ಕಲಾಲ್ ಮತ್ತು ಅಲಾವುದ್ದೀನ್ ಉರ್ಫ್ ರಹೀಂ ಬಂಧಿತ ಆರೋಪಿಗಳು. ಈ ಮೂಲಕ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಈ ಮೊದಲು 9 ಮಂದಿಯನ್ನು ಬಂಧಿಸಿದ್ದೆವು. ಈಗ ಮತ್ತೆ ಮೂವರನ್ನು ಬಂಧನ ಮಾಡಿದ್ದೇವೆ. ಕೃತ್ಯ ನಡೆದ ಸ್ಥಳದಲ್ಲಿ ಆರು ಜನ ಇದ್ದರೆ ಪರೋಕ್ಷವಾಗಿ ಕೂಡ ಕೊಲೆಗೆ ಕೆಲವರು ಸಹಕರಿಸಿದ್ದಾರೆ. ಕೊಲೆಯಾದ ಫೈರೋಜ್ ಪಠಾಣ್ ಮತ್ತು ಪ್ರಮುಖ ಆರೋಪಿ ಮಧ್ಯೆ ಸಂಘರ್ಷವಿತ್ತು. ಇದನ್ನು ಹೊರತುಪಡಿಸಿ ಬೇರೆ ಕಾರಣವೂ ಕೊಲೆಗೆ ಇದೆ ಎಂದರು.
ಆರೋಪಿಗಳ ಹಿನ್ನೆಲೆ ನೋಡಿದರೆ ಇಲ್ಲಿ ರಾಜಕೀಯ ಮುಖಂಡರು ಎಂಬ ಪ್ರಶ್ನೆ ಬರುವುದಿಲ್ಲ. ಅವರ ಪಾತ್ರ ಇದ್ದರೆ ಮಾತ್ರ ಆರೋಪಿಗಳು ಆಗುತ್ತಾರೆ. ಸಾಕ್ಷಾಧಾರ ಕಂಡು ಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಕೊಲೆಯಲ್ಲಿ ಬೇರೆ ಬೇರೆ ಆಯಾಮ ಇರುವುದು ಕಂಡುಬಂದಿದೆ. ಕೃತ್ಯಕ್ಕೆ ಹಣ ಹೊಂದಿಸಿ ಬಹಳ ತಯಾರಿ ಮಾಡಿಕೊಂಡಿದ್ದರು. ಬಹಳಷ್ಟು ಜನರನ್ನು ವಿಚಾರಣೆ ಮಾಡುತ್ತಿದ್ದೇವೆ, ಹುಡುಕಾಟ ಕೂಡ ನಡೆಸಿದ್ದೇವೆ. ನಾವು ಹುಡುಕಾಟ ನಡೆಸಿದವರ ಬಗ್ಗೆ ಮಾಹಿತಿ ನೀಡಿದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವು ಕಾರಣ ಈಗ ಅವರ ಹೆಸರು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಏಪ್ರಿಲ್ 10ರಂದು ರಾತ್ರಿ ಸುಮಾರು 9:30 ರಿಂದ 10 ಗಂಟೆಯ ಅವಧಿಯಲ್ಲಿ, ದುಷ್ಕರ್ಮಿಗಳ ಗುಂಪು ಫೈರೋಜ್ ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ತಡೆಯಲು ಬಂದ ಅವರ ತಾಯಿ ಮತ್ತು ತಂಗಿಗೂ ಸಣ್ಣಪುಟ್ಟ ಗಾಯಗಳಾಗಿತ್ತು.

