ನವದೆಹಲಿ: ಭಾರತಕ್ಕೆ ಈಗ ಮಾವೋವಾದಿಗಳ (Maoist) ಭೀತಿ ದೂರವಾಗಿದ್ದು, ನಕ್ಸಲ್ ವಾದದ ಭದ್ರಕೋಟೆಯಾಗಿದ್ದ ಛತ್ತೀಸ್ಗಢದ ಬಸ್ತಾರ್ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.
ನಕ್ಸಲ್ ನಿರ್ಮೂಲನೆಗೆ ಸರ್ಕಾರ ನೀಡಿದ್ದ ಮಾರ್ಚ್ 31ರ ಗಡುವಿನ ವಿಚಾರವಾಗಿ ಲೋಕಸಭೆಯಲ್ಲಿ (Lok Sabha) ಚರ್ಚೆ ನಡೆಯಿತು. ಈ ವೇಳೆ ಅವರು ಚರ್ಚೆಗೆ ಉತ್ತರಿಸುತ್ತಾ, ದೇಶದಲ್ಲಿ ನಕ್ಸಲ್ ವಾದ (Naxalism) ಈಗ ಅಳಿವಿನ ಅಂಚಿನಲ್ಲಿದೆ. ಸಂಪೂರ್ಣ ಪ್ರಕ್ರಿಯೆಯು ಔಪಚಾರಿಕವಾಗಿ ಪೂರ್ಣಗೊಂಡ ನಂತರ ದೇಶಕ್ಕೆ ಅದನ್ನು ತಿಳಸಲಾಗುತ್ತದೆ. ಆದರೆ ಈಗ ನಾವು ನಕ್ಸಲ್ ಮುಕ್ತರಾಗಿದ್ದೇವೆ ಎಂದು ನಾನು ಹೇಳಬಲ್ಲೆ ಎಂದರು. ಇದನ್ನೂ ಓದಿ: ಕುಖ್ಯಾತ ನಕ್ಸಲ್ ನಾಯಕ ರಾಮಧೇರ್ ಮಜ್ಜಿ ಸೇರಿ 11 ಮಂದಿ ಶರಣು – ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ಗಢ ನಕ್ಸಲ್ ಮುಕ್ತ?
ಬಸ್ತಾರ್ನಿಂದ ನಕ್ಸಲ್ ವಾದವನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ. ಬಸ್ತಾರ್ನಾದ್ಯಂತ ಪ್ರತಿಯೊಂದು ಹಳ್ಳಿಯಲ್ಲಿಯೂ ಶಾಲೆಯನ್ನು ನಿರ್ಮಿಸಲು ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ಹಳ್ಳಿಯಲ್ಲಿ ಪಡಿತರ ಅಂಗಡಿಯನ್ನು ತೆರೆಯಲು ಚಾಲನೆ ನೀಡಲಾಗಿದೆ. ಪ್ರತಿ ತಾಲೂಕು ಮತ್ತು ಪಂಚಾಯತ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ಆಧಾರ್ ಕಾರ್ಡ್ಗಳು ಮತ್ತು ಪಡಿತರ ಚೀಟಿಗಳನ್ನು ನೀಡಲಾಗಿದೆ. ಅವರು ಈಗ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
Speaking in the Lok Sabha on India’s Decisive Fight Against Naxalism, under the Leadership of PM Shri @narendramodi Ji. https://t.co/nlr3ksjBfI
— Amit Shah (@AmitShah) March 30, 2026
ಬಸ್ತಾರ್ನ ಜನರ ಮೇಲೆ ‘ಕೆಂಪು ಭಯೋತ್ಪಾದನೆ’ಯ ನೆರಳು ಆವರಿಸಿದ್ದರಿಂದ ಅವರು ಹಿಂದುಳಿದಿದ್ದರು. ಅದಕ್ಕಾಗಿಯೇ ಅಭಿವೃದ್ಧಿ ಅವರನ್ನು ತಲುಪಲು ವಿಫಲವಾಗಿತ್ತು. ಇಂದು, ಆ ನೆರಳನ್ನು ತೆಗೆದುಹಾಕಲಾಗಿದೆ. ಬಸ್ತಾರ್ ಈಗ ಅಭಿವೃದ್ಧಿಯ ಹಾದಿಯಲ್ಲಿದೆ ಎಂದರು.
ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಸರ್ಕಾರವು ನಿಮ್ಮ ಪುನರ್ವಸತಿಯನ್ನು ಖಚಿತಪಡಿಸುತ್ತದೆ. ಆದಾಗ್ಯೂ, ನಿರಾಕರಿಸಿದರೆ ನಮ್ಮ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಶರಣಾಗುವವರೊಂದಿಗೆ ನಾವು ಸಂವಾದಕ್ಕೆ ಮುಕ್ತರಾಗಿದ್ದೇವೆ. ಹಿಂಸೆಯನ್ನು ಆರಿಸಿಕೊಳ್ಳುವವರಿಗೆ ಸರಿಯಾದ ಉತ್ತರ ನೀಡಲಾಗುವುದು ಎಂದು ಬಸ್ತಾರ್ನಲ್ಲಿ ಸಾರ್ವಜನಿಕವಾಗಿ ಈ ಹಿಂದೆ ಹಲವು ಬಾರಿ ಹೇಳಿದ್ದೆ. ಈಗ ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ ಎಂದು ಎಚ್ಚರಿಕೆ ರವಾನಿಸಿದರು.
ಇದೇ ವೇಳೆ ಬಿಜೆಪಿ ಸದಸ್ಯರು ದೇಶದಲ್ಲಿ ಮಾವೋವಾದದ ಪ್ರಸರಣಕ್ಕೆ ಕಾಂಗ್ರೆಸ್ನ 60 ವರ್ಷಗಳ ಆಡಳಿತವನ್ನು ದೂಷಿಸಿದರು. ಮಾವೋವಾದಿ ಹಿಂಸಾಚಾರವು 20,000 ಯುವಜನರ ಜೀವ ಬಲಿ ತೆಗೆದುಕೊಂಡಿದೆ. ಅಲ್ಲದೇ 12.6 ಕೋಟಿ ಜನರನ್ನು ಬಾಧಿಸಿದೆ. ಬುಡಕಟ್ಟು ಜನಾಂಗದವರು ಮತ್ತು ಇತರ ಹಲವಾರು ಸಮುದಾಯಗಳು ಅಭಿವೃದ್ಧಿಯಿಂದ ವಂಚಿತರಾಗಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದರು.
ಕಳೆದ 75 ವರ್ಷಗಳಲ್ಲಿ, ಕಾಂಗ್ರೆಸ್ ಪಕ್ಷವು 60 ವರ್ಷಗಳ ಕಾಲ ಆಡಳಿತ ನಡೆಸಿತ್ತು. ಹಾಗಾದರೆ, ಬುಡಕಟ್ಟು ಸಮುದಾಯಗಳು ಅಭಿವೃದ್ಧಿಯಿಂದ ವಂಚಿತರಾಗಲು ಕಾರಣವೇನು? ದೇಶದೊಳಗೆ, ಕಾಶ್ಮೀರ ಮತ್ತು ಈಶಾನ್ಯದಲ್ಲಿನ ಉಗ್ರ ಚಟುವಟಿಕೆಗಿಂತ ನಕ್ಸಲಿಸಂ ದೊಡ್ಡ ಸವಾಲನ್ನು ಒಡ್ಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಇದರ ಹೊರತಾಗಿಯೂ ಕಾಂಗ್ರೆಸ್ ಏನೂ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಇದನ್ನೂ ಓದಿ: ಜಾರ್ಖಂಡ್ | ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್ ನಾಯಕರ ಎನ್ಕೌಂಟರ್

