ಬಾಗಲಕೋಟೆ: ಉಪ ಚುನಾವಣೆಯಲ್ಲಿ (By Election) ಸೋಲಿಸಿದರೆ ಮುಂದಿನ ಎರಡು ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ (Congress) ಧೂಳಿಪಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಭವಿಷ್ಯ ನುಡಿದರು.
ಬೇವೂರು ಗ್ರಾಮದಲ್ಲಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಉಪಚುನಾವಣೆ ಸದವಕಾಶವಾಗಿದೆ. 2023 ರಲ್ಲಿ ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆ ಕೊಟ್ಟು ಜನರ ಭಾವನೆಗಳನ್ನು ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರು. ಈಗ ಮೂರು ವರ್ಷದಲ್ಲಿ ತಾವೆಲ್ಲ ನೋಡಿದ್ದೀರಿ ಬಾಗಲಕೊಟೆಯ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಸಿಎಂ ನಂಬಿಕೊಂಡಿರುವ ಅಹಿಂದ ಜನರೇ ಭ್ರಮನಿರಸನಗೊಂಡಿದ್ದಾರೆ ಎಂದರು.
ಎಲ್ಲಾ ಎಸ್ಟಿ ಜನಾಂಗಕ್ಕೆ ನಮ್ಮ ಕಾಲದಲ್ಲಿ ಗಂಗಾ ಕಲ್ಯಾಣ ಯೋಜನೆ ಕೊಡುತ್ತಿದ್ದೆವು. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಕೊಡುತ್ತಿದ್ದೆವು. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿದ್ದೆವು. ಈ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ನಿಲ್ಲಿಸಿದೆ ಎಂದು ಕಿಡಿಕಾರಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕೂಡಲ ಸಂಗಮ ಮುಳುಗಿದೆ. ಈಗ ಎರಡನೇ ಹಂತದಲ್ಲಿ ಬಹಳಷ್ಟು ಜಮೀನು ಮುಳುಗಲಿದೆ. ನಾನು ಸಿಎಂ ಆಗಿದ್ದಾಗ 4 ಸಾವಿರ ಕೋಟಿ ಮೀಸಲಿಟ್ಟು ಪರಿಹಾರ ಕೊಡಲು ಮುಂದಾಗಿದ್ದೆ, ಅದನ್ನು ಕಾಂಗ್ರೆಸ್ ನವರು ವಿರೋಧಿಸಿದ್ದರು. ಈಗ ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ವರು ಪರಿಹಾರ ಕೊಡುತ್ತಿದ್ದಾರೆ. ಇಲ್ಲಿ 1 ಲಕ್ಷ 30 ಸಾವಿರ ಕೋಟಿ ರೂ. ಪರಿಹಾರ ಕೊಡಬೇಕು. 75 ಸಾವಿರ ಕೋಟಿ ರೂ. ಜಮೀನು ಕಳೆದುಕೊಂಡವರಿಗೆ ಕೊಡಬೇಕು. ಅವರೇ ಒಂದು ಆದೇಶ ಮಾಡಿ ಒಣ ಬೇಸಾಯದ ಜಮೀನಿಗೆ ಇಷ್ಟು, ನೀರಾವರಿಗೆ ಇಷ್ಟು ಎಂದು ಪ್ರತಿ ವರ್ಷ 18 ಸಾವಿರ ಕೋಟಿ ಕೊಡುತ್ತೇನೆ ಎಂದು ಹೇಳಿ ಆದೇಶ ಮಾಡಿ, ಈಗ ಬಜೆಟ್ ನಲ್ಲಿ 3 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದ್ದಾರೆ. ಅದನ್ನೂ ಕೂಡ ಪೂರ್ಣ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತೊಡೆ ತಟ್ಟಿದ್ದ ಪ್ರದೀಪ್ ಈಶ್ವರ್ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು
ಕಾಂಗ್ರೆಸ್ನಿಂದ ಮೋಸ
ಜನರು ಜಮೀನು ಮನೆ ಮತ್ತೆ ಕಳೆದುಕೊಂಡವರ ಪರಿಸ್ಥಿತಿ ಗಂಭೀರ ಇದೆ. ಕಾಂಗ್ರೆಸ್ ಈ ಭಾಗದ ಬಡವರ ಎಸಿ ಎಸ್ಪಿ ಸಮುದಾಯದ ಜನರಿಗೆ ಮೋಸ ಮಾಡುತ್ತಿದೆ. ಇದು ಮುಂಬರುವ ಎರಡು ವರ್ಷದಲ್ಲಿ ಕಾಂಗ್ರೆಸನ್ನು ಕಟ್ಟಿ ಹಾಕಬೇಕೆನ್ನುವ ದಿಕ್ಸೂಚಿ ಚುನಾವಣೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದರೆ ಮುಂದಿನ ಎರಡು ವರ್ಷದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಸಿದ್ದರಾಮಯ್ಯ ಅವರನ್ನು ಮೈಸೂರಿನ ಜನ ಕೈ ಬಿಟ್ಟಾಗ ಉತ್ತರ ಕರ್ನಾಟಕದ ಬಾದಾಮಿಯ ಜನರು ಕೈ ಹಿಡಿದಿದ್ದರು. ಅವರನ್ನು ಬಿಟ್ಟು ಮತ್ತೆ ಮೈಸೂರಿಗೆ ಹೋದರು. ಜನರು ಮರ್ಯಾದೆ ಕೊಡುತ್ತಾರೆ ಎಂದು ದುರುಪಯೋಗ ಪಡೆಸಿಕೊಂಡಿದ್ದಾರೆ. ಅದಕ್ಕೆ ಈಗ ಅವರಿಗೆ ಪಾಠ ಕಲಿಸುವ ಸಂದರ್ಭ ಬಂದಿದೆ ಎಂದರು.
ಈಗ ಬಾಗಲಕೋಟೆ ಉಪ ಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಅವರು ನಿಂತಿದ್ದಾರೆ. ಅವರು ನೇರ ನುಡಿಯ ನಾಯಕ, ಸತ್ಯವನ್ನೇ ನುಡಿಯುವ ವ್ಯಕ್ತಿ ಏನಾದರೂ ಕೆಲಸ ಹಿಡಿದರೆ ಬಿಡುವುದಿಲ್ಲ. ನವನಗರಕ್ಕೆ 700 ಕೋಟಿ ರೂ. ಬೇಕೆಂದು ಪಟ್ಟು ಹಿಡಿದು ತಂದು ಕೆಲಸ ಮಾಡಿಸಿದರು. ಅವರದು ಸಾವಿರಾರು ಕೋಟಿ ವ್ಯವಹಾರ ನಡೆಯುವ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಇದೆ. ಅದರಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ. ಸಾರ್ವಜನಿಕರಿಂದಲೂ ಯಾವುದೇ ಹಣ ಪಡೆದಿಲ್ಲ. ಈಗ ರಾಜ್ಯದಲ್ಲಿ ಶೇ 60 ರಷ್ಟು ಭ್ರಷ್ಟಾಚಾರ ಇದೆ. ಹೀಗಾಗಿ ಮತ್ತೊಮ್ಮೆ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸನ್ನು ಧೂಳಿಪಟ ಮಾಡಬೇಕು. ಅದಕ್ಕಾಗಿ ಮನೆ ಮನೆಗೆ ತೆರಳಿ ಕಮಲಕ್ಕೆ ಮತ ಹಾಕುವಂತೆ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಬಾಗಲಕೋಟೆ ಗ್ರಾಮೀಣ ಮಂಡಳದ ಅಧ್ಯಕ್ಷರಾದ ಸುರೇಶ ಕೊಣ್ಣೂರ, ಮುಖಂಡರುಗಳಾದ ರಾಜಶೇಖರ ಮುದೇನೂರ, ಡಾ ಶರಣಬಸಪ್ಪ ಯತ್ನಳ್ಳಿ, ಬಸವರಾಜ ಪರ್ವತಿಮಠ, ಕಲ್ಲಪ್ಪ ಕೊಡಬಾಗಿ, ಶೇಖರಪ್ಪ ಹೆರಕಲ್ಲ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

