ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಉಲ್ಬಣಗೊಂಡಿರುವ ಸಮಸ್ಯೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರ ನೇತೃತ್ವದಲ್ಲಿಂದು ಸರ್ವಪಕ್ಷ ಸಭೆ (All Party Meet) ನಡೆಯಿತು.
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗಿಯಾಗಿದ್ದರು. ಆದರೆ, ಪ್ರಧಾನಿ ಮೋದಿ (Narendra Modi) ಸಭೆಗೆ ಯಾಕೆ ಬಂದಿಲ್ಲ..? ಪ್ರಮುಖ ಸಭೆಗಳಿಗೆ ಮೋದಿ ಗೈರಾದರೆ ಹೇಗೆ..? ಅಂತ ವಿಪಕ್ಷಗಳು ಆಕ್ಷೇಪಿಸಿದವು.

ಅಲ್ಲದೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ಮೋದಿ ಏನು ಮಾತಾಡಿದ್ದಾರೆ..? ಅಂತ ಪ್ರಶ್ನಿಸಿವೆ. ಇದಕ್ಕೆ ಜೈಶಂಕರ್ ಅವರು ಉತ್ತರಿಸಿ ಯುದ್ಧ ಕೊನೆಗೊಳಿಸಬೇಕು. ಯುದ್ಧದಿಂದ ಎಲ್ಲರಿಗೂ ತೊಂದರೆ ಆಗ್ತಿದೆ ಅಂತ ಮೋದಿ ಒತ್ತಾಯಿಸಿದ್ದಾರೆ ಅಂತ ವಿವರಿಸಿದ್ದಾರೆ. ಇನ್ನೂ ಪಾಕಿಸ್ತಾನ (Pakistan) ಮಧ್ಯಸ್ಥಿಕೆ ವಹಿಸ್ತಿದ್ಯಲ್ಲ ಅನ್ನೋ ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿ, ನಾವು ದಲ್ಲಾಳಿಗಳು ಆಗೋಕೆ ಆಗಲ್ಲ ಅಂತ ಹೇಳಿದ್ದಾರೆಂದು ತಿಳಿದುಬಂದಿದೆ.
ಈ ಮಧ್ಯೆ, ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಭಾರತ ಮುಂದಿನ ತಿಂಗಳು ವಿತರಣೆಗಾಗಿ ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲ ಖರೀದಿ ಮಾಡಿದೆ. ಮೂಲಗಳ ಪ್ರಕಾರ, ಬ್ರೆಂಟ್ ಕಚ್ಚಾ ತೈಲಕ್ಕಿಂತ ಪ್ರತಿ ಬ್ಯಾರಲ್ಗೆ 5 ರಿಂದ 15 ಡಾಲರ್ವರೆಗಿನ ಪ್ರೀಮಿಯಂನಲ್ಲಿ ಬುಕ್ ಮಾಡಲಾಗಿದೆ. ಇದು ಕಳೆದ ಫೆಬ್ರವರಿಯಲ್ಲಿ ಭಾರತ ಖರೀದಿಸಿದ ತೈಲಕ್ಕಿಂತ 2 ಪಟ್ಟು ಹೆಚ್ಚಾಗಿದೆ. ಈಗ ಬುಕಿಂಗ್ ಮಾಡಲಾದ 60 ಮಿಲಿಯನ್ ಬ್ಯಾರಲ್ ಕಚ್ಚಾತೈಲವು ಮುಂದಿನ ತಿಂಗಳು ಭಾರತವನ್ನ ತಲುಪಲಿದೆ.

