ಚಿಕ್ಕಮಗಳೂರು: ಯುಗಾದಿ ಹಬ್ಬದ ದಿನವೇ ಕಾಲಭೈರವೇಶ್ವನ ದೇಗುಲದ (Kalabairaveshwara Temple) ಎದುರು ವಾಮಾಚಾರ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ (Kalasa) ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ನಡೆದಿದೆ.
ಅಮಾವಾಸ್ಯೆ ಹಿನ್ನೆಲೆ ಕಳೆದ ರಾತ್ರಿ ದುಷ್ಕರ್ಮಿಗಳು ದೇವರ ಗುಡಿ ಎದುರೇ ವಾಮಾಚಾರ ನಡೆಸಿದ್ದಾರೆ. ದೇವಸ್ಥಾನದ ಮುಂಭಾಗ ದೊಡ್ಡ ಕಲ್ಲುಗಳನ್ನ ವೃತ್ತಾಕಾರದಲ್ಲಿ ಇಟ್ಟು ಅದರ ಮಧ್ಯೆ ವಾಮಾಚಾರ ನಡೆಸಿದ್ದಾರೆ. ಅರಿಶಿನ-ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ ಹಾಗೂ ನಾಣ್ಯಗಳನ್ನು ಕೃತ್ಯಕ್ಕೆ ಬಳಸಿದ್ದಾರೆ. ಇದನ್ನೂ ಓದಿ: ಗುಪ್ತಾಂಗ, ದೇಹದ ಮೇಲೆ 17 ಬಾರಿ ಚಾಕುವಿನಿಂದ ಇರಿದು ಕ್ರೌರ್ಯ – ಅಪ್ರಾಪ್ತೆಯನ್ನ ಪ್ರೀತಿಸಿ, ಎಂಗೇಜ್ಮೆಂಟ್ ಆಗಿದ್ದ ಭಾವಿ ಪತಿ ಎಸ್ಕೇಪ್
ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನಕ್ಕೆ ಒಳಪಡುವ ಈ ಕಾಲಭೈರವನ ಗುಡಿ ಅತ್ಯಂತ ಪುರಾತನವಾದದ್ದು. ಪ್ರತಿ ವರ್ಷ ಕಳಸೇಶ್ವರ ದೇವಸ್ಥಾನದ ಗಿರಿಜಾಕಲ್ಯಾಣ ರಥ ಇದೇ ಮಾರ್ಗವಾಗಿ ಸಾಗುತ್ತದೆ. ಕಳೆದ ವರ್ಷ ಕೂಡ ಯುಗಾದಿಯ ಹಿಂದಿನ ದಿನ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಈಗ ಹಬ್ಬದ ದಿನವೇ ಜನವಸತಿ ಇರುವ ಪ್ರದೇಶದಲ್ಲಿ, ಅದರಲ್ಲೂ ನಿತ್ಯ ನೂರಾರು ಜನ ಓಡಾಡುವ ಜಾಗದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಧ್ಯರಾತ್ರಿ 2 ರಿಂದ 3 ಗಂಟೆಯ ಅವಧಿಯಲ್ಲಿ ಈ ವಾಮಾಚಾರ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕಳಸ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಥಳೀಯರ ಸಹಕಾರ ಇಲ್ಲದೇ ಬೇರೆಯವರು ಈ ಕೃತ್ಯ ನಡೆಸಲು ಆಗುವುದಿಲ್ಲ. ದೇವರ ಗುಡಿ ಎದುರು ವಾಮಾಚಾರ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಧಾರವಾಡ | ಕೋರ್ಟ್ಗೆ ಹಾಜರಾಗದೇ 7 ವರ್ಷ ತಲೆಮರೆಸಿಕೊಂಡಿದ್ದ ಪಾಲಿಕೆ ಮಾಜಿ ಸದಸ್ಯ ಅರೆಸ್ಟ್

