ಅಕ್ರಮ ಆಸ್ತಿ ಗಳಿಕೆ ಪ್ರಕರಣ – ವಿಚಾರಣೆ ಎದುರಿಸಿದ ಜಮೀರ್

Public TV
1 Min Read
zameer ahmed

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹಮದ್ (Zameer Ahmed) ಲೋಕಾಯುಕ್ತ (Lokayukta) ವಿಚಾರಣೆ ಎದುರಿಸಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದ್ದಾರೆ. ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ ಎಂದು ಅವರು ಹೇಳಿದ್ದಾರೆ.

ಐಎಂಎ ಕೇಸ್‍ನಲ್ಲಿ ಜಮೀರ್ ಮನೆ ಮೇಲೆ ಇಡಿ (ED) ದಾಳಿ ನಡೆಸಿದ್ದಾಗ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಇಡಿಯವರು ಎಸಿಬಿಗೆ ವರ್ಗಾಯಿಸಿದ್ದರು. 2021ರಲ್ಲಿ ಜಮೀರ್ ಮೇಲೆ ಎಫ್‍ಐಆರ್ ಆಗಿತ್ತು. ಈಗ ಎಸಿಬಿ ರದ್ದಾಗಿ, ಲೋಕಾಯುಕ್ತಕ್ಕೆ ಕೇಸ್ ವರ್ಗಾವಣೆಯಾಗಿದೆ. 3 ಬಾರಿ ಸಮನ್ಸ್ ಕೊಟ್ಟಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಡಿಸೆಂಬರ್ 3ರಂದು ಖುದ್ದು ವಿಚಾರಣೆಗೆ ಬರುವಂತೆ ಲೋಕಾಯುಕ್ತ ಡಿವೈಎಸ್‌ಪಿ ಸಚಿವ ಜಮೀರ್‌ ಅವರಿಗೆ ನೋಟಿಸ್‌ ನೀಡಿದ್ದರು. ಇಡಿ ದಾಳಿ ಬಳಿಕ ಜಮೀರ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್‌ ದಾಖಲಾಗಿ ಎರಡು ವರ್ಷಗಳಿಂದ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಹಿಂದೆ ಜಮೀರ್‌ ಅವರಿಗೆ ಕೇಸ್‌ಗೆ ಸಂಬಂಧಿಸಿದ ಕೆಲವು ದಾಖಲೆ ಸಲ್ಲಿಸಲು ಸಹ ನೋಟಿಸ್ ನೀಡಲಾಗಿತ್ತು. ಈಗ ಖುದ್ದಾಗಿ ವಿಚಾರಣೆಗೆ ಹಾಜರಾಗಿ, ತಮ್ಮ ಹೇಳಿಕೆ ದಾಖಲಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

Share This Article