ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಂದೇಶಖಾಲಿಯ ಮಹಿಳೆಯರು (Sandeshkhali Women) ಪ್ರಯಾಣಿಸುತ್ತಿದ್ದ ಬಸ್ಗಳನ್ನು ಪೊಲೀಸರು ತಡೆದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ (West Bengal) ಬರಾಸತ್ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯಲ್ಲಿ ಭಾಗವಹಿಸಲು ಸಂದೇಶಖಾಲಿಯ ಮಹಿಳೆಯರು ಕೆಲ ಬಸ್ಗಳಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಭದ್ರತಾ ಪ್ರೋಟೋಕಾಲ್ ಕಾರಣವನ್ನು ಮುಂದಿಟ್ಟು ಬಸ್ಗಳನ್ನು ಪೊಲೀಸರು ತಡೆದಿದ್ದಾರೆ. ಇದನ್ನೂ ಓದಿ: ಸಂದೇಶ್ಖಾಲಿ ಹಿಂಸಾಚಾರ ಪ್ರಕರಣ – ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್
ಉತ್ತರ 24 ಪರಗಣಗಳ ಜಿಲ್ಲಾ ಕೇಂದ್ರ ಪಟ್ಟಣವಾದ ಬರಾಸತ್ನಲ್ಲಿರುವ ಕಚಾರಿ ಮೈದಾನದಲ್ಲಿ ಪ್ರಧಾನಿ ಮೋದಿ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಮಹಿಳಾ ದೌರ್ಜನ್ಯ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಆತನ ಸಹಚರರಿಂದ ಚಿತ್ರಹಿಂಸೆಗೊಳಗಾದ ಸಂದೇಶಖಾಲಿಯ ಮಹಿಳೆಯರನ್ನು ರ್ಯಾಲಿ ಸ್ಥಳಕ್ಕೆ ಕರೆದೊಯ್ಯಲು ರಾಜ್ಯ ಬಿಜೆಪಿ ಬಸ್ಗಳ ವ್ಯವಸ್ಥೆ ಮಾಡಿತ್ತು.
ಬಸ್ಗಳನ್ನು ಮೊದಲು ನ್ಯೂ ಟೌನ್ನ ಬಿಸ್ವಾ ಬಂಗ್ಲಾ ಗೇಟ್ನಲ್ಲಿ ತಡೆಯಲಾಯಿತು. ನಂತರ ಮತ್ತೆ ಬರಾಸತ್ಗೆ ಹೋಗುವ ಮಾರ್ಗದಲ್ಲಿ ಏರ್ಪೋರ್ಟ್ ಗೇಟ್ 1 ರಲ್ಲಿ ಭದ್ರತಾ ಪ್ರೋಟೋಕಾಲ್ ನೆಪ ಹೇಳಿ ಪೊಲೀಸರು ನಮ್ಮನ್ನು ಪ್ರಧಾನಿ ರ್ಯಾಲಿಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ
ಪ್ರಧಾನ ಮಂತ್ರಿಯವರು ಬರಾಸತ್ಗೆ ಪ್ರಯಾಣಿಸಲಿರುವ ಕಾರಣ ‘ಸುರಕ್ಷತಾ ಪ್ರೋಟೋಕಾಲ್’ ಕಾರಣದಿಂದಾಗಿ ರಸ್ತೆಯ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಇಡೀ ರಸ್ತೆಯ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.