– ದೇವೇಗೌಡರ ಕುಟುಂಬವನ್ನು ಯಾರಿಂದ್ಲೂ ಒಡೆಯಲು ಆಗಲ್ಲ
ಹಾಸನ: ಅಲ್ಪಸಂಖ್ಯಾತರಿಗೆ ಎಲ್ಲಿಯೂ ಮೀಸಲಾತಿ (Reservation) ಕೊಟ್ಟಿರಲಿಲ್ಲ. 1994 ರಲ್ಲಿ ದೇವೇಗೌಡರು (HD Deve Gowda) 2ಬಿ ಮೀಸಲಾತಿ ಕೊಟ್ಟರು. ಆದರೀಗ ಈ ಮೀಸಲಾತಿಯನ್ನು ದುರುದ್ದೇಶ ಪೂರಿತವಾಗಿ ತೆಗೆದಿದ್ದು, ವಂಚಿತ ಜನರ ಶಾಪ ರದ್ದು ಮಾಡಿದವರಿಗೆ ತಟ್ಟಲಿದೆ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಕಿಡಿಕಾರಿದ್ದಾರೆ.
ಹಾಸನ (Hassan) ಜಿಲ್ಲೆ, ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಂಜಾನ್ ಉಪವಾಸ ಸಂದರ್ಭದಲ್ಲೇ ಮೀಸಲಾತಿ ತೆಗೆದಿದ್ದಾರೆ. ಆ ಭಕ್ತಿಯೇ ಈ ಸರ್ಕಾರ ತೆಗೆಯಲಿದೆ. ನಾವ್ಯಾರೂ ತೆಗೆಯಬೇಕಿಲ್ಲ. ಮುಂದೆ ಮೀಸಲಾತಿಯನ್ನು ನಾವು ಜಾರಿ ಮಾಡುತ್ತೇವೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಹಾಕಿಸಿಕೊಂಡಿತು. ಆದರೆ ಮೀಸಲಾತಿ ಕೊಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ-ಕಾಂಗ್ರೆಸ್ ಎರಡೂ ಅಡ್ಜೆಸ್ಟ್ಮೆಂಟ್ ಸರ್ಕಾರ. ರಾತ್ರಿ ಹೊತ್ತು ಇಬ್ಬರೂ ಮಾತಾಡ್ತಾರೆ. ಬೆಳಗ್ಗೆ ಇವರನ್ನು ಅವರು, ಅವರನ್ನು ಇವರು ಬೈಯ್ದಾಡುತ್ತಾರೆ. ಮೀಸಲಾತಿ ಹೆಸರಿನಲ್ಲಿ ಹೊಡೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
2 ವರ್ಷ ಸ್ವಾಮೀಜಿಗಳು ಹೋರಾಟ ಮಾಡಿದ್ರೆ, ಈಗ ಅದನ್ನು ಜಾರಿ ಮಾಡಿದ್ದಾರೆ. ಅದೂ ಜಾರಿ ಆಗುತ್ತೋ, ಇಲ್ಲವೊ ಗೊತ್ತಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ಜಾತಿ ಜಾತಿ ನಡುವೆ ಹೊಡೆದಾಡಿಸುತ್ತಿದ್ದಾರೆ. ಜಾತಿ ಸಂಘರ್ಷ ಮಾಡಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
2023ರ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕುಮಾರಸ್ವಾಮಿ (HD Kumaraswamy) ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಎರಡೂ ಪಕ್ಷಗಳನ್ನು ಜನರು ನೋಡಿದ್ದಾರೆ. ಕುಮಾರಸ್ವಾಮಿ ಅವರ 14 ತಿಂಗಳ ಆಡಳಿತ ಕೂಡ ನೋಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ ಯಾರಾದ್ರು ಇದ್ದರೆ ಅದು ಕುಮಾರಸ್ವಾಮಿ. 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಹಿಂದೆ ಕೆಲವರು ಹಾಸನ ಬಜೆಟ್, ಮಂಡ್ಯ ಬಜೆಟ್, ರಾಮನಗರ ಬಜೆಟ್ ಎಂದು ಅಣಕಿಸಿದ್ರೂ ತಲೆ ಕೆಡಿಸಿಕೊಳ್ಳದೆ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿಯವರು ಹಾಸನಕ್ಕೆ ತಾಂತ್ರಿಕ ವಿವಿ ತಡೆ ಹಿಡಿದರು ಎಂದರು.
ಲಿಂಗೇಶ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಬೇಲೂರಿಗೆ ರಣಘಟ್ಟ ಯೋಜನೆ ಆಗಿದೆ. ನಾನು ಸಚಿವ ಆಗಿದ್ದಾಗ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ಹಣ ಬಂದಿದೆ. ಕಳೆದ ಬಾರಿ ಅಪಪ್ರಚಾರದ ನಡುವೆಯೂ 38 ಸೀಟ್ ಬಂದಿತ್ತು. ನಮ್ಮ ಜಿಲ್ಲೆಗೆ ಕೊಟ್ಟ ಹಣವನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋದರು. ಆದರೂ ನಮ್ಮ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಸಾಕಷ್ಟು ಅಭಿವೃದ್ಧಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದರೆ ಅದು ಹಾಸನ ಜಿಲ್ಲೆಯಲ್ಲಿ ಎಂದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಡಿಗಲ್ಲು ಹಾಕಿದ ಯೋಜನೆ ರದ್ದು ಮಾಡಿದ್ದರು. ಬೇಲೂರು-ಹಾಸನ 4 ಪಥದ ರಸ್ತೆಗೆ ಮತ್ತೆ 900 ಕೋಟಿ ರೂ. ಜಾರಿಯಾಗಿದೆ. ಜಿಲ್ಲೆಯ ಎಲ್ಲಾ ರಸ್ತೆಗೆ ನಾನು ಸಚಿವನಾಗಿದ್ದಾಗ 2 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಈಗ ಹೊಸದಾಗಿ ಎಲ್ಲೋ ಶೆಡ್ ಹಾಕಲು ಅನುದಾನ ಕೊಟ್ಟಿರಬೇಕು ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ದೇವೇಗೌಡರ ಕುಟುಂಬವನ್ನು ಒಡೆಯಲು ಯಾರಿಂದಲೂ ಆಗಲ್ಲ. ಯಾರೂ ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದಲ್ಲಿ ಬೇರೆ ಯಾರೂ ಇಲ್ಲವೇ, ಅದೇನೊ ದೇವೇಗೌಡರನ್ನೇ ತೋರಿಸಬೇಕು ಎಂದು ಅಸಮಧಾನ ಹೊರ ಹಾಕಿದರು. ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ಆಗಿದೆ. ಇದೊಂದು ಐತಿಹಾಸಿಕ ದಿನ. ಬೇಲೂರು ಹಾಗೂ ಅಕ್ಕಪಕ್ಕದ ಜಿಲ್ಲೆಯಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅವರ ಕುಟುಂಬಗಳು ಯಾವುದೇ ಸಂಕಷ್ಟಕ್ಕೆ ಸಿಗಬಾರದೆಂದು ಪ್ರಾರ್ಥನೆ ಮಾಡಿ ಹೋಗಿದ್ದಾರೆ. ನಾನೂ ಪ್ರತಿ ವರ್ಷ ಬೇಲೂರು ಜಾತ್ರೆಗೆ ಬರುತ್ತೇನೆ ಎಂದರು. ಇದನ್ನೂ ಓದಿ: 70 ಸೀಟ್ ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ: ಶಾಮನೂರು ಸ್ಫೋಟಕ ಹೇಳಿಕೆ