ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಶೇ. 93.2ರಷ್ಟು ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಅತೀ ಹೆಚ್ವು ಗ್ರಹಣಗೋಚರ ಸ್ಥಳಗಳಲ್ಲಿ ಉಡುಪಿಯೂ ಒಂದಾಗಿದೆ.
ಜಿಲ್ಲೆಯಲ್ಲಿ 9.24 ನಿಮಿಷಕ್ಕೆ ಗ್ರಹಣ ಪೀಕ್ ಲೆವೆಲ್ ತಲುಪಿತ್ತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಅಮೆಚೂರ್ ಆಸ್ಡ್ರೋನಾಮರ್ಸ್ ಕ್ಲಬ್ ಆಯೋಜಿಸಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾದರು. ಮಕ್ಕಳು, ಮಹಿಳೆಯರು, ಯುವಕ ಯುವತಿಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಗ್ರಹಣ ವೀಕ್ಷಣೆ ಮಾಡಿದರು.
ಗ್ರಹಣ ತನ್ನ ಅಂತಿಮ ಘಟ್ಟ ತಲುಪಿದಾಗ ಜನರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಬಂದ ಎಲ್ಲರಿಗೂ ಗ್ರಹಣವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಪಬ್ಲಿಕ್ ಹೀರೋ ಎಪಿ ಭಟ್ ಮಾಡಿದ್ದರು. ಗ್ರಹಣ ಕಂಕಣದತ್ತ ಬರುತ್ತಿದ್ದ ಸಂದರ್ಭ ಮಾತನಾಡಿದ ಅವರು, ಉಡುಪಿಯಲ್ಲಿ ಬೆಳಗ್ಗೆಯೇ ಕತ್ತಲಾಗುತ್ತಿದೆ. ಇದೊಂದು ಖಗೋಳ ಕೌತುಕ ಎಂದರು. 64 ವರ್ಷದ ಬಳಿಕ ಬರುವ ಈ ವಿದ್ಯಮಾನ ಮಿಸ್ ಮಾಡಿಕೊಳ್ಳಬಾರದು ಎಂದು ರಾಜ್ಯದ ಲಕ್ಷ ಜನ ಗ್ರಹಣ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.
ಗ್ರಹಣ ವೀಕ್ಷಿಸಿದ ಧಾತ್ರಿ ಮತ್ತು ನಿಧಿ ಮಾತನಾಡಿ, ಗ್ರಹಣ ಅಂದಾಗ ಕುತೂಹಲವಿತ್ತು, ಭಯ ಆಗಿಲ್ಲ. ಪಿಪಿಸಿಯಲ್ಲಿ ಗ್ರಹಣ ವೀಕ್ಷಣೆ ವ್ಯವಸ್ಥೆ ಬಹಳ ಚೆನ್ನಾಗಿದೆ. ನಾವು ವಿಜ್ಞಾನ ನಂಬುವವರು. ಜ್ಯೋತಿಷಿಗಳು ಹೇಳುವುದನ್ನು ನಂಬಲ್ಲ ಅಂತ ಹೇಳಿದರು. ಇಡೀ ಪ್ರಕ್ರಿಯೆಯ ಫೋಟೋ ತೆಗೆದುಕೊಂಡಿದ್ದೇವೆ. ಇದೊಂದು ಮರೆಯಲಾಗದ ದಿನ ಅಂತ ಸಂತೋಷ ಹಂಚಿಕೊಂಡರು.