ಉಡುಪಿ: ಬರೋಬ್ಬರಿ 7 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಶಾಲೆಯೊಂದರ ತರಗತಿಗೆ ನುಗ್ಗಿ ಮಕ್ಕಳನ್ನು ಬೆಚ್ಚಿಬೀಳಿಸಿದ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ನಡೆದಿದೆ.
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕಾಳಿಂಗ ಸರ್ಪ, ಚಿರತೆ, ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಗದ್ದೆ, ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪ ಇದೀಗ ಹೊಸಂಗಡಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ತಗರತಿಗೆ ಬಂದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿತ್ತು. ಕಾಳಿಂಗ ಸರ್ಪ ಕ್ಲಾಸಿಗೆ ನುಗ್ಗಿದ ಪರಿಣಾಮ ನೂರಾರು ಮಕ್ಕಳು ಭಯಭೀತಗೊಂಡರು. ಅಲ್ಲದೆ ಬರೋಬ್ಬರಿ 7 ಅಡಿ ಉದ್ದದ ಕಾಳಿಂಗನನ್ನು ನೋಡಿ ವಿದ್ಯಾರ್ಥಿಗಳು ತರಗತಿಯಿಂದ ಹೊರ ಓಡಿದ್ದಾರೆ. ವಿದ್ಯಾರ್ಥಿಗಳ ಭಯ ಕಂಡು ಶಿಕ್ಷಕರು ತಕ್ಷಣ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಸರ್ಪವನ್ನು ಹಿಡಿಸಿದ್ದಾರೆ.
ಸ್ಥಳಕ್ಕೆ ಬಂದು ಉರಗ ತಜ್ಞರು ಕಾರ್ಯಾಚರಣೆ ಇಳಿದ ಸಂದರ್ಭದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಹರಸಾಹಸ ಪಡಬೇಕಾಯ್ತು. ಬಿಲದೊಳಗೆ ಸೇರಲು ಹೋಗಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಸೆರೆಹಿಡಿದು ಗೋಣಿಚೀಲಕ್ಕೆ ತುಂಬಿಸಲಾಯ್ತು. ಗೋಣಿಯ ಬಾಯಿಗೆ ಪೈಪ್ ಕಟ್ಟಿ, ಕೃತಕ ಬಿಲವನ್ನು ನಿರ್ಮಿಸಿ ಹಾವನ್ನು ಸೆರೆ ಹಿಡಿದ ದೃಶ್ಯ ಬಹಳ ರೋಚಕವಾಗಿತ್ತು. ಹಾವನ್ನು ಸೆರೆ ಹಿಡಿದ ಮೇಲೆ ಮಕ್ಕಳು ಹಾಗೂ ಶಿಕ್ಷಕರು ನಿರಾಳಾರಾದರು. ಸದ್ಯ ಸರೆಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv