ದಾವಣಗೆರೆ: ಪ್ರಾಥಮಿಕ ಶಾಲೆಯ ಸಿಎಸ್ಎಎಸ್ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿಸಿದ್ದ 7 ಮಂದಿ ಶಿಕ್ಷಕರನ್ನು ದಾವಣಗೆರೆ ಡಿಡಿಪಿಐ ಅಮಾನತು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ.
ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಸೇವಾನಗರ ಶಾಲೆಯಲ್ಲಿ ಶಿಕ್ಷಕರು ಸಾಮೂಹಿಕ ನಕಲು ಮಾಡಿಸಿದ್ದರು. ನಕಲು ಮಾಡಿಸುತ್ತಿದ್ದ ವೀಡಿಯೋ ವೈರಲ್ ಆದ ಹಿನ್ನಲೆ ಡಿಡಿಪಿಐ ಕೋದಂಡರಾಮ ಅವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಹ ಶಿಕ್ಷಕರಾದ ಅಂಗಡಿ ಶಾಂತಪ್ಪ, ಮಮತಾ, ಪರಮೇಶ್ವರನಾಯ್ಕ, ಹನುಮಂತಪ್ಪ, ಮಹದೇವಮ್ಮ ಮತ್ತು ಲಲಿತಾಬಾಯಿ ಅಮಾನತುಗೊಂಡವರು ಎಂದು ತಿಳಿದುಬಂದಿದೆ. 4 ರಿಂದ 7 ನೇ ತರಗತಿ ಮಕ್ಕಳ ಕಲಿಕಾ ಗುಣಮಟ್ಟ ತಿಳಿದುಕೊಳ್ಳಲು ನಡೆಸುವ ಪರೀಕ್ಷೆ ಇದಾಗಿದ್ದು, ಇದರಲ್ಲಿ ನಮ್ಮ ಶಾಲೆಯಿಂದ ಉತ್ತಮ ಫಲಿತಾಂಶ ಬರಲಿ ಎನ್ನುವ ನಿಟ್ಟಿನಲ್ಲಿ ಶಿಕ್ಷಕರೇ ನಕಲು ಮಾಡಿಸಿದ್ದರು ಎನ್ನಲಾಗಿದೆ.
ಸಾರ್ವಜನಿಕ ದೂರಿನನ್ವಯ ಡಿಡಿಪಿಐರವರು ನಾಗರಿಕ ಸೇವಾ ನಿಯಮಾವಳಿ 1957 ರ ನಿಯಮ 3 (123) ಹಾಗೂ ರಾಜ್ಯ ಕಾಪಿ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕಾರ ಕ್ರಮ ಕೈಗೊಂಡಿದ್ದಾರೆ.