ತಿರುಪತಿ/ಹೈದರಾಬಾದ್: ತಿಮ್ಮಪ್ಪನ ಸನ್ನಿಧಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ಇಂದಿನಿಂದ ಆರಂಭಗೊಳ್ಳಲಿದೆ.
ಪೂಜೆಯ ಭಾಗವಾಗಿ ಇಂದು ರಾತ್ರಿ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ತಿಮ್ಮಪ್ಪನ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದ್ದು, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಆಗಮಶಾಸ್ತ್ರದ ಪ್ರಕಾರ ಧಾರ್ಮಿಕ ವಿಧಿವಿಧಾನ ಆರಂಭವಾಗಲಿದೆ. ವಿಶೇಷ ಮಹಾಸಂಪ್ರೋಕ್ಷಣೆ ಕಾರ್ಯವನ್ನು ಆಂಧ್ರ, ಕರ್ನಾಟಕ, ತೆಲಂಗಾಣದ 45 ಆಗಮ ಪಂಡಿತರು ನಡೆಸಲಿದ್ದಾರೆ. ಬಳಿಕ ಗುರುವಾರದವರೆಗೂ ತಿಮ್ಮಪ್ಪನ ಪದತಳದಲ್ಲಿ ಅಷ್ಟಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣೆ ಮಾಡಲಾಗುತ್ತದೆ.
- Advertisement 2
- Advertisement 3
ಮಹಾ ಯಾಗಕ್ಕಾಗಿ ತಿರುಮಲದ ಯೋಗಶಾಲೆಯಲ್ಲಿ 28 ಹೋಮ ಗುಂಡಿ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತುಪ್ಪದ ದೀಪದ ಬೆಳಕಿನಲ್ಲೇ ಹೋಮ ಹವನ ನಡೆಸಲು ತೀರ್ಮಾನ ಮಾಡಲಾಗಿದೆ. ಈ ವೇಳೆ ಭಕ್ತರ ದರ್ಶನಕ್ಕೆ ದೇವಾಲಯದ ಟಿಟಿಡಿ ಸಮಿತಿ ನಿರ್ಬಂಧ ಹೇರಿದೆ. ಟಿಟಿಡಿ ಗುರುವಾರದಿಂದಲೇ ತಿಮ್ಮಪ್ಪನ ದಿವ್ಯ ದರ್ಶನ, ಸರ್ವದರ್ಶನ ಟೋಕನ್ ನೀಡುವುದನ್ನು ರದ್ದು ಮಾಡಿದ್ದು, ಸರತಿ ಸಾಲಿನಲ್ಲಿ ಬರುವ ಭಕ್ತರಿಗೂ ಮಿತಿ ಹೇರಿದೆ.
- Advertisement 4
ಏನಿದು ಬಾಲಾಲಯ ಮಹಾಸಂಪ್ರೋಕ್ಷಣೆ?: ತಿಮ್ಮಪ್ಪನ ಮೂಲವಿರಾಟ್ ಮತ್ತು ಇತರೆ ದೇವರ ವಿಗ್ರಹಗಳ ಶಕ್ತಿಯನ್ನು ಬಿಂಬದಿಂದ ಕುಂಭದೊಳಕ್ಕೆ ಆವಾಹನೆ ಮಾಡುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರಣೆಯನ್ನು 12 ವರ್ಷಗಳಿಗೆ ಒಮ್ಮೆ ಮಾತ್ರ ಮಾಡಲಾಗುತ್ತದೆ.
ಅಷ್ಟಬಂಧನ: 8 ರೀತಿಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣ. ಈ ಚೂರ್ಣದ ಆಯಸ್ಸು 12 ವರ್ಷಗಳ ಕಾಲ ಇರುತ್ತದೆ. ಈ ಅಷ್ಟ ಬಂಧನವನ್ನು ತಿಮ್ಮಪ್ಪನ ಪಾದದಲ್ಲಿ ಇರಿಸುತ್ತಾರೆ. ವಿಶೇಷವಾಗಿ ಮಹಾಸಂಪ್ರೋಕ್ಷಣೆ ವೇಳೆ ದೇಗುಲದ ಸಿಬ್ಬಂದಿಗೂ ರಾಮುಲವಾರಿ ಮೇಡ ದಾಟಲು ಅವಕಾಶ ಇರಲ್ಲ.
30 ಸಾವಿರ ಭಕ್ತಿಗೆ ಮಾತ್ರ ಅವಕಾಶ: ದೇವರಿಗೆ ನಡೆಯುವ ಪ್ರಕ್ರಿಯೆ ಬಾಲಾಲಯ ಮಹಾಸಂಪ್ರೋಕ್ಷಣೆ ವಿಶೇಷ ಪೂಜಾ ಕಾರ್ಯದ ದಿನಗಳಲ್ಲಿ ಟಿಟಿಡಿ ಸಮಿತಿ 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಿದೆ. ಆಗಸ್ಟ್ 16 ರ ವರೆಗೂ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಟಿಟಿಡಿ ಸಮಿತಿ ತಿಳಿಸಿದೆ. ಈ ಹಿಂದಿನ ವರ್ಷಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಪ್ರತಿನಿತ್ಯ ಸುಮಾರು 1 ಲಕ್ಷ ಮಂದಿ ದೇವರ ದರ್ಶನ ಪಡೆಯುತ್ತಿದ್ದರು.
ಈ ಹಿಂದೆ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವ 6 ದಿನಗಳ ಅವಧಿಯಲ್ಲಿ ಭಕ್ತರಿಗೆ ದೇವರ ದರ್ಶನ ಕಾರ್ಯ ನೀಡದಿರಲು ಟಿಟಿಡಿ ನಿರ್ಧರಿಸಿತ್ತು. ಆದರೆ ಈ ಬಳಿಕ ನಡೆದ ಚರ್ಚೆಗಳಲ್ಲಿ ಭಕ್ತರಿಂದ ಒತ್ತಡ ಹೆಚ್ಚಾಗಿದ್ದರಿಂದ ಸದ್ಯ 30 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews