ಮಂಡ್ಯ: ಗಂಡುಗೊಬ್ಬಳಿ ಮರದ ಕಾಯಿ ತಿಂದು 50 ಕುರಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಿಲ್ಲೆ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಮಲ್ಲನಾಯಕನಹಳ್ಳಿ ಗ್ರಾಮದ ಗೋವಿಂದಪ್ಪ ಮತ್ತು ರಂಗಪ್ಪ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ತುಮಕೂರಿನಲ್ಲಿ ತೀವ್ರ ಬರಗಾಲದಿಂದ ಕುರಿ ಮೇಯಿಸಲು ಕುರಿಗಾಹಿಗಳು ಮಂಡ್ಯಕ್ಕೆ ವಲಸೆ ಬಂದಿದ್ದರು.
ಎಂದಿನಂತೆ ತೋಟ – ಗದ್ದೆಗಳಲ್ಲಿ ಮೇಹಿಸಲು ಕುರಿಗಳನ್ನು ಕರೆದುಕೊಂಡು ಹೋಗಿದ್ದರು. ಆದರೆ ಭಾನುವಾರ ಕುರಿ ಮೇಯಿಸುವಾಗ ಗಂಡುಗೊಬ್ಬಳಿ ಎಂಬ ಮರದ ಕಾಯಿಗಳು ಕೆಳಗೆ ಬಿದ್ದಿವೆ. ಹೀಗಾಗಿ ಕುರಿಗಳು ಅದರ ಕಾಯಿಯನ್ನು ತಿಂದಿದ್ದು, ಪರಿಣಾಮ ಒಂದೇ ಬಾರಿಗೆ 50 ಕುರಿ ಸಾವನ್ನಪ್ಪಿವೆ.
ಏಕಾಏಕಿ 50 ಕುರಿಗಳು ಸಾವಿನಿಂದ ಕಂಗಾಲಾದ ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದು, ನಮಗೆ ಈ ಮರದ ಬೀಜಗಳನ್ನು ತಿಂದರೆ ಕುರಿ ಸಾಯುತ್ತವೆ ಎಂದು ತಿಳಿದಿರಲಿಲ್ಲ. ಆದರೆ ನಮ್ಮ ಜೀವನಾಧಾರವಾಗಿದ್ದ ಸುಮಾರು 50 ಕುರಿಗಳು ಸಾವನ್ನಪ್ಪಿವೆ. ಇದರಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ. ಸರ್ಕಾರ ಪರಿಹಾರ ನೀಡಿ ನಮ್ಮನ್ನು ಕಾಪಾಡಬೇಕು ಎಂದು ಕುರಿಗಾಹಿಗಳು ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv