ಶಿವಮೊಗ್ಗ: ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಕ್ಕಿದೆ. ಬಿಜೆಪಿಯ 50-60 ಪರ್ಸೆಂಟ್ ಜನರು ನನ್ನ ಜೊತೆ ನಿಂತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ (K.S.Eshwarappa) ತಿಳಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರು ಗೆಲ್ತೀನಿ ಎನ್ನುವ ವಿಶ್ವಾಸ ನನಗಿದೆ. ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಗೆದ್ದೇ ಗೆಲ್ತೀನಿ. ನನ್ನ ಸಂಖ್ಯೆ 8, ಕಬ್ಬನ್ನ ಹಿಡಿದಿರೋ ರೈತ ನನ್ನ ಗುರುತು, ನನ್ನನ್ನ ಗೆಲ್ಲಿಸಿ. ಮೋದಿಯನ್ನ ಪ್ರಧಾನಿ ಮಾಡಲು ನನಗೆ ಮತ ನೀಡಿ, ನನ್ನನ್ನ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: Lok Sabha Election: ಶಿವಮೊಗ್ಗದಲ್ಲಿ ಅತಿ ಹೆಚ್ಚು, ರಾಯಚೂರಿನಲ್ಲಿ ಕಡಿಮೆ ಮತದಾನ
ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಈಶ್ವರಪ್ಪ, ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಪುತ್ರ, ಸೊಸೆ, ಪತ್ನಿ ಜೊತೆ ಬಂದು ಮತದಾನ ಮಾಡಿದರು. ನಗರದ ಸೈನ್ಸ್ ಕಾಲೇಜು ಆವರಣದ ಮತಗಟ್ಟೆಯಲ್ಲಿ ಮತದಾನ ಮಾಡಿದ ಈಶ್ವರಪ್ಪಗೆ ಬೆಂಬಲಿಗರು ಕೂಡ ಸಾಥ್ ನೀಡಿದರು.
ಮತದಾನಕ್ಕೂ ಮುನ್ನ ಈಶ್ವರಪ್ಪ ಮನೆಯಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಮನೆಯಲ್ಲಿ ಮನೆದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈಶ್ವರಪ್ಪ, ಪತ್ನಿ, ಪುತ್ರ ಕಾಂತೇಶ್, ಸೊಸೆ ಹಾಗೂ ಮಗಳು-ಮೊಮ್ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಈಶ್ವರಪ್ಪ ಕುಟುಂಬ ಮತದಾನಕ್ಕೆ ತೆರಳಿತು. ಇದನ್ನೂ ಓದಿ: ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಿಎಸ್ವೈ ಕುಟುಂಬ