ರಾಯಚೂರು: ಲಿಂಗಸುಗೂರು ತಾಲೂಕಿನ ನಾಗಲಾಪೂರ ಬಳಿ ಮಿಂಚಿನ ದಾಳಿ ನಡೆಸಿದ ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಸಾವಯವ ಗೊಬ್ಬರವನ್ನ ಜಪ್ತಿ ಮಾಡಿದೆ.
ಕಲಬುರ್ಗಿಯ ಅಫಜಲಪುರದ ರೇಣುಕಾ ಶುಗರ್ ಫ್ಯಾಕ್ಟರಿಯಿಂದ ಕನಕಗಿರಿಗೆ ಸಾಗಿಸುತ್ತಿದ್ದ ನಕಲಿ ಗೊಬ್ಬರದ ಚೀಲಗಳನ್ನು ಜಪ್ತಿಮಾಡಲಾಗಿದೆ. 40 ಕೆ.ಜಿ.ತೂಕದ 462 ಚೀಲ ಗೊಬ್ಬರ ಹಾಗೂ ಸಾಗಾಟ ಮಾಡುತಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಗಾರು ಹಂಗಾಮು ಉತ್ತಮವಾಗಿರುವುದರಿಂದ ಎಲ್ಲೆಡೆ ಬಿತ್ತನೆ ಕಾರ್ಯ ಜೋರಾಗಿದೆ. ಹೀಗಾಗಿ ರೈತರು ಬೀಜ ಗೊಬ್ಬರಕ್ಕಾಗಿ ಪರಿತಪಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ದಂದೆಕೋರರು ನಕಲಿ ಗೊಬ್ಬರ ಮಾರಾಟ ನಡೆಸಿದ್ದಾರೆ. ನಕಲಿ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.