ಯಾದಗಿರಿ: ಕೊರೊನಾ ಲಾಕ್ಡೌನ್ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವ ಪಡಿತರ ಅಂಗಡಿಗಳ ಮೇಲೆ 420 ಕೇಸ್ ದಾಖಲು ಮಾಡಲಾಗುತ್ತದೆ ಎಂದು ಪಶುಸಂಗೋಪನೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾನ್ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿಯ ಸುರಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಪಡಿತರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ಜನರಿಗೆ ನೀಡುತ್ತಿವೆ. ಜನರು ತೀರಾ ಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಜನರಿಗೆ ಮೋಸ ಆಗುವುದನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಸಚಿವರ ಮಾತಿಗೆ ಧ್ವನಿಗೂಡಿಸಿದ ಶಾಸಕ ರಾಜುಗೌಡ ಪಡಿತರ ಅಂಗಡಿಗಳು ಕೊರೊನಾ ಕರ್ಫೂ ಇದ್ದರೂ ಜನರಿಗೆ ಪಡಿತರ ಹಂಚಿಕೆಯಲ್ಲಿ ಮಹಾ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಇದನ್ನು ಮಟ್ಟಹಾಕಬೇಕು ಅಂದರೆ ಕೇವಲ ಕ್ರಮ ತೆಗೆದುಕೊಂಡ್ರೆ ಸಾಲದು, ಮುಲಾಜಿಲ್ಲದೆ 420 ಕೇಸ್ ಹಾಕಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.