ಗಾಂಧಿನಗರ: ಜೇಡಿಮಣ್ಣನ್ನು ಬಳಸಿ ಪಟಾಕಿ ತಯಾರಿಸುವ 400 ವರ್ಷಗಳಷ್ಟು ಹಳೆಯದಾದ ವಿಧಾನವನ್ನು ವಡೋದರದಲ್ಲಿ ಮತ್ತೆ ಆರಂಭಿಸಲಾಗಿದೆ.
ವಡೋದರಾ ಜಿಲ್ಲೆಯ ಕುಮ್ಹರ್ವಾಡ, ಫತೇಪುರ್ನಲ್ಲಿ ಕೆಲವು ಕುಶಲಕರ್ಮಿಗಳು ವಾಸವಾಗಿದ್ದಾರೆ. ಅವರು ಜೇಡಿಮಣ್ಣಿನಿಂದ ಪಟಾಕಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ʼಕೋಥಿಸ್ʼ ಹೆಸರಿನಲ್ಲಿ ಕರೆಯಲ್ಪಡುವ ವಿವಿಧ ಮಾದರಿಯ ಪಟಾಕಿಗಳನ್ನು ಅವರು ತಯಾರಿಸುತ್ತಾರೆ. ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ 22 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್
ಚೀನಾದ ಹೊಸ ಮಾದರಿಯ ಪಟಾಕಿಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಪರಿಣಾಮವಾಗಿ ವಡೋದರದಲ್ಲಿ ಪಟಾಕಿ ತಯಾರಿಸುವ ಹಳೆಯ ವಿಧಾನ ನಿಂತುಹೋಯಿತು. ಈಗ ಮತ್ತೆ ಆರಂಭವಾಗಿದೆ.
400 ವರ್ಷಗಳಷ್ಟು ಹಳೆಯದಾದ ಈ ಉತ್ಪಾದನಾ ಕಲೆಯನ್ನು ಪ್ರೋತ್ಸಾಹಿಸಲು ಪ್ರಮುಖ್ ಪರಿವಾರ ಫೌಂಡೇಷನ್ ಎಂಬ ಎನ್ಜಿಒ ಸಹಾಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ “ವೋಕಲ್ ಫಾರ್ ಲೋಕಲ್” (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಕರೆಯಿಂದ ಪ್ರೇರೇಪಣೆಗೊಂಡು ಈ ಕಾರ್ಯ ಮಾಡುತ್ತಿರುವುದಾಗಿ ಎನ್ಜಿಒ ತಿಳಿಸಿದೆ. ಈ ಕಲೆ ಮುಂದಿನ ಪೀಳಿಗೆಗೆ ಬಳುವಳಿ ಅಷ್ಟೇ ಅಲ್ಲ, ಸ್ತಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಸಹಕಾರಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಮಗ ಮನೆಗೆ ಹಿಂದಿರುಗುತ್ತಿದ್ದಂತೆ ಶಾರೂಖ್ ನಿವಾಸದಲ್ಲಿ ಕಳೆಗಟ್ಟಿದ ದೀಪಾವಳಿ ಹಬ್ಬದ ಸಂಭ್ರಮ
“ಇದು ಅಪ್ಪಟ ಸ್ಥಳೀಯ ಕಲೆಯಾಗಿದೆ. ಕೋಥಿಸ್ ಪಟಾಕಿಗಳನ್ನು ಜೇಡಿಮಣ್ಣಿನಿಂದ ಮಾಡಲಾಗುತ್ತದೆ. ಇದು ಪರಿಸರ ಸ್ನೇಹಿಯಾಗಿದೆ. ಈ ಪಟಾಕಿಗಳನ್ನು ಬಳಸಿದ ನಂತರ ಕರಗಿಸಬಹುದು. ಮಕ್ಕಳು ಸುರಕ್ಷಿತವಾಗಿಯೇ ಇವುಗಳನ್ನು ಬಳಸಬಹುದು. ಯಾರು ಬೇಕಾದರೂ ಈ ಪಟಾಕಿಗಳನ್ನು ಬಳಸಬಹುದು” ಎಂದು ಫೌಂಡೇಷನ್ನ ಅಧ್ಯಕ್ಷ ನಿತಲ್ ಗಾಂಧಿ ತಿಳಿಸಿದ್ದಾರೆ.
“ಈ ಪಟಾಕಿಗಳು ಕೈಯಲ್ಲಿ ಹಿಡಿದುಕೊಂಡು ಸಿಡಿಸುವಷ್ಟು ಸುರಕ್ಷಿತವಾಗಿವೆ. ನಮ್ಮ ಪೂರ್ವಿಕರೆಲ್ಲ ಇದೇ ಮಾದರಿ ಪಟಾಕಿಗಳನ್ನು ಬಳಸುತ್ತಿದ್ದರು. 20 ವರ್ಷಗಳ ಹಿಂದೆಯೇ ನಷ್ಟದ ಕಾರಣ ನಾನು ಈ ಪಟಾಕಿಗಳನ್ನು ತಯಾರಿಸುವುದನ್ನು ನಿಲ್ಲಿಸಿದ್ದೆ. ಆದರೆ ನಿತಲ್ ಅವರು ಇಲ್ಲಿ ಸುತ್ತಾಡುತ್ತಿದ್ದಾಗ ಅವರಿಗೆ ಒಂದಷ್ಟು ಸ್ಯಾಂಪಲ್ಸ್ ತೋರಿಸಿದ್ದೆ. ಅವರ ಸಲಹೆಯಂತೆ ಮತ್ತೆ ಪಟಾಕಿ ತಯಾರಿಸುವುದು ಆರಂಭಿಸಿದ್ದೇನೆ. ದೀಪಾವಳಿ ಸಂದರ್ಭದಲ್ಲಿ ನಮಗೆ ಆದಾಯವೂ ಬರುತ್ತಿದೆ. 1.5 ಲಕ್ಷ ಕೋಥಿಸ್ ಪಟಾಕಿಗಳನ್ನು ತಯಾರಿಸಲಿದ್ದೇವೆ” ಎಂದು ಕುಶಲಕರ್ಮಿ ರಾಮನ್ ಪ್ರಜಾಪತಿ ಹೇಳಿದ್ದಾರೆ.