ಚಿಕ್ಕಮಗಳೂರು: ಶಾಲೆ, ಕೋಳಿ ಅಂಗಡಿ ಹಾಗೂ ಗ್ಯಾರೇಜ್ ಸೇರಿದಂತೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಅತ್ತಿಗೆರೆ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದೆ.
ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಡೇ ಕಾರ್ಯಕ್ರಮ ಮುಗಿಸಿ ಎಲ್ಲ ಉಪಕರಣಗಳನ್ನು ಒಂದು ರೂಮಿನಲ್ಲಿ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು. ಅದೇ ದಿನ ರಾತ್ರಿ ಕಳ್ಳರು ಶಾಲೆಯ ಬೀಗ ಒಡೆದು ಸುಮಾರು 40 ಸಾವಿರ ಮೌಲ್ಯದ ಪ್ರೊಜೆಕ್ಟರ್, ಎರಡು ಸಾವಿರ ಹಣ ಹಾಗೂ ಉಳಿದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಇದನ್ನೂ ಓದಿ: ಇನ್ನೋವಾ ಕಾರಲ್ಲಿ ಬಂದು ಕಳ್ಳತನ – ಸಿಸಿಟಿವಿಯಲ್ಲಿ ಶ್ರೀಮಂತ ಕಳ್ಳರ ಕೈಚಳಕ ಸೆರೆ
ಜೊತೆಗೆ, ಕೊಟ್ಟಿಗೆಹಾರದ ಕೋಳಿ ಅಂಗಡಿ ಹಾಗೂ ಗ್ಯಾರೇಜ್ನಲ್ಲೂ ಹಣವನ್ನು ದೋಚಿದ್ದಾರೆ. ಹೀಗೆ ಸರಣಿ ಕಳ್ಳತನ ನಡೆಯಲು ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕೊಟ್ಟಿಗೆಹಾರದ ಜನ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೊಟ್ಟಿಗೆಹಾರದಲ್ಲಿ ಈ ಹಿಂದೆ ಕೂಡ ಸರಣಿ ಕಳ್ಳತನ ನಡೆದಿದೆ. ಪೊಲೀಸರು ಯಾರನ್ನೂ ಬಂಧಿಸಿಲ್ಲ. ಅತ್ತಿಗೆರೆಯ ಸೋಮೇಶ್ವರ್ ದೇವಸ್ಥಾನದಲ್ಲಿ 18 ಗಂಟೆಗಳನ್ನ ಕಳ್ಳತನ ಮಾಡಿದ್ದರು. ಅವರನ್ನೂ ಹಿಡಿಯಲಿಲ್ಲ. ಗ್ಯಾಸ್ ವ್ಯಾಪಾರಿ ದುಗ್ಗಪ್ಪ ಅವರ ಮನೆಯಲ್ಲಿ ಸುಮಾರು ಮೂರು ಲಕ್ಷ ಹಣ ದೋಚಿದ್ದರು. ಆ ಕಳ್ಳರನ್ನೂ ಹಿಡಿಯಲಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರ ವೈಫಲ್ಯವೇ ಹೀಗೆ ಸರಣಿ ಕಳ್ಳತನ ನಡೆಯಲು ಕಾರಣ. ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಕಳ್ಳರನ್ನ ಹಿಡಿಯದಿದ್ದರೆ ಕಳ್ಳರಿಗೆ ಪೊಲೀಸರ ಮೇಲೆ ಭಯ ಇರುವುದಿಲ್ಲ. ಸರಣಿ ಕಳ್ಳತನ ನಡೆಯುವುದದರಿಂದ ಕೊಟ್ಟಿಗೆಹಾರದ ಜನ ಕೂಡ ಆತಂಕದಿದ್ದಾರೆ. ಕೂಡಲೇ ಪೊಲೀಸರು ಕಳ್ಳರನ್ನ ಬಂಧಿಸಬೇಕೆಂದು ಕೊಟ್ಟಿಗೆಹಾರದ ಜನ ಪೊಲೀಸರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಉಕ್ರೇನ್ನಿಂದ ಬಂದ ಕರ್ನಾಟಕ ವಿದ್ಯಾರ್ಥಿಗಳ ಭವಿಷ್ಯ ಏನು?: ವಿಧಾನಸಭೆಯಲ್ಲಿ ಖಾದರ್ ಪ್ರಸ್ತಾಪ
ಪ್ರಕರಣ ದಾಖಲಿಸಿಕೊಂಡ ಬಣಕಲ್ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಪೊಲೀಸ್ ಶ್ವಾನದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಕಳ್ಳತನಕ್ಕೆ ಬಂದಿದ್ದ ಕಳ್ಳರು ತಂದಿದ್ದ ರಾಡ್ಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಪೊಲೀಸರು ಅವುಗಳನ್ನೂ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.