– ರಾಜ್ಕುಮಾರ್, ಅಂಬರೀಶ್, ಶಿವಣ್ಣನನ್ನು ನೆನಪಿಸಿಕೊಂಡ ಜಗ್ಗೇಶ್
ಬೆಂಗಳೂರು: 40 ವರ್ಷದ ಸಿನಿಮಾ ಪಯಣವನ್ನು ನೆನಪು ಮಾಡಿಕೊಂಡು ನವರಸ ನಾಯಕ ಜಗ್ಗೇಶ್ ಅವರು ಕಣ್ಣೀರು ಹಾಕಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ 40 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದೇ ವೇಳೆ ತಮ್ಮ ಆರಂಭ ದಿನಗಳ ಮತ್ತು ತಾವು ಪಟ್ಟ ಕಷ್ಟಗಳನ್ನು ನೆನೆದರು. ಜೊತೆಗೆ ತಮ್ಮ ಮಕ್ಕಳ ಬಗ್ಗೆ ಹಾಗೂ ರಾಯರ ಬಗ್ಗೆ ಮಾತನಾಡಿದರು. ಕಷ್ಟ ಕಾಲದಲ್ಲಿ ತಮ್ಮ ಜೊತೆಗೆ ನಿಂತ ಚಿತ್ರರಂಗದ ಹಲವಾರು ಮಂದಿಗೆ ಧನ್ಯವಾದ ಹೇಳಿದರು.
ಚಿತ್ರರಂಗಕ್ಕೆ ಬಂದ ಪ್ರಾರಂಭದ ದಿನಗಳನ್ನು ನೆನಪು ಮಾಡಿಕೊಂಡ ಜಗ್ಗೇಶ್, ಎರಡು ಚಿತ್ರಗಳು ನನ್ನ ಬದುಕಿಗೆ ದೊಡ್ಡ ಓಪನಿಂಗ್ ಕೊಟ್ಟಿವೆ. ಅದರಲ್ಲಿ ಶಿವಣ್ಣ ಅಭಿನಯದ ‘ರಣರಂಗ’ ಸಿನಿಮಾ ಕೂಡ ಒಂದು. ಗಣೇಶನ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಶಿವಣ್ಣನ ಮನೆಗೆ ಹೋಗಿದ್ದೆ. ಅಂದು ಶಿವಣ್ಣ ಅವರೇ ನನಗೆ ‘ರಣರಂಗ’ ಸಿನಿಮಾದಲ್ಲಿ ಅವಕಾಶ ಕೊಡಿಸಿದರು. ಬೇರೆಯವರಿಗೆ ಫಿಕ್ಸ್ ಆಗಿದ್ದ ರೋಲ್ ಅನ್ನು ಬದಲಿಸಿ ನನಗೆ ಕೊಡಿಸಿದರು ಎಂದು ಶಿವಣ್ಣನನ್ನು ನೆನಪು ಮಾಡಿಕೊಂಡರು.
ಜೊತೆಗೆ ತಾವು ಮೊದಲ ದಿನ ಕ್ಯಾಮೆರಾ ಫೇಸ್ ಮಾಡಿದ್ದ ದಿನಗಳನ್ನು ನೆನೆದು, ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಭಾವುಕರಾದರು. ನನ್ನ ಅಭಿನಯ ನೋಡಿ ಡಾ. ರಾಜಕುಮಾರ್ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಅವರ ಜೊತೆ ದಿನಪೂರ್ತಿ ಕಳೆಯುವ ಅವಕಾಶ ಸಿಕ್ಕಿತ್ತು. ರಾಜ್ಕುಮಾರ್ ಅವರನ್ನು ಎಲ್ಲರೂ ಒಬ್ಬ ಕಲಾವಿದ ಎಂದು ನೋಡುತ್ತಾರೆ. ಆದರೆ ನಾನು ಅವರಲ್ಲಿ ಒಬ್ಬ ಸಂತನನ್ನು ನೋಡಿದ್ದೆ ಎಂದ ಜಗ್ಗೇಶ್ ರಾಜ್ಕುಮಾರ್ ಅವರನ್ನು ಹಾಡಿಹೊಗಳಿದರು.
ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅವರನ್ನು ಸ್ಮರಿಸಿದ ಜಗ್ಗೇಶ್, ‘ರೌಡಿ ಎಂಎಲ್ಎ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಅಂಬರೀಶ್ ಲೇ ಕರಿಯಾ ಹೀರೋ ಆಗು ಅಂದಿದ್ದರು. ನಾನು ನಾಯಕ ಆದೆ. ಆ ಸಿನಿಮಾದಲ್ಲಿ ಅಂಬರೀಶ್ಗೆ ಗೆಸ್ಟ್ ರೋಲ್ ಮಾಡಿಸಿದ್ದೆ. ಜೊತೆಗೆ ಆ ಸಿನಿಮಾವನ್ನು ನಾನೇ ನಿರ್ಮಿಸಿದ್ದೆ. ಆ ವೇಳೆ ಮಗನ ಸ್ಕೂಲ್ ಫೀಸ್ ಕಟ್ಟೋಕೆ ಆಗಿರಲಿಲ್ಲ. ಮಧ್ಯರಾತ್ರಿ 2 ಗಂಟೆಗೆ ಅಂಬರೀಶ್ ಅವರ ಮನೆಗೆ ಹೋಗಿದ್ದೆ ಸರಿಯಾಗಿ ಬೈದು ಕಳಿಸಿದರು. ನಂತರ ಮಾಣಿಕ್ ಚಂದ್ ಎಂಬವರು ಕರೆ ಮಾಡಿದರು. ಅಂಬರೀಶ್ ಹೇಳಿದ್ರು ಸಿನಿಮಾ ಮಾಡಿದಿರಂತೆ ಎಂದರು. ಅವರೇ ಕೈಯಿಂದ 5 ಲಕ್ಷ ಹಾಕಿ ಸಿನಿಮಾ ರಿಲೀಸ್ ಮಾಡಿದರು. ಆ ಸಿನಿಮಾ ಇತಿಹಾಸ ಬರೆಯಿತು. ಅಂದಿನ ಕಾಲದಲ್ಲೇ 1 ಕೋಟಿ ಕಲೆಕ್ಷನ್ ಮಾಡಿತ್ತು ಎಂದು ಕಷ್ಟದಲ್ಲಿ ನೆರವಾಗಿದ್ದ ಅಂಬಿಯವರನ್ನು ಸ್ಮರಿಸಿದರು.