– ತನಿಖೆ ವೇಳೆ ಮತ್ತಷ್ಟು ಸಂಚುಗಳ ಮಾಹಿತಿ ಬಹಿರಂಗ ಸಾಧ್ಯತೆ
ಬೆಂಗಳೂರು: ದಾಳಿಗೆ ಸಂಚು ರೂಪಿಸುತ್ತಿದ್ದ ನಾಲ್ವರು ಶಂಕಿತ ಉಗ್ರರನ್ನು 52ನೇ ಸಿಸಿಎಚ್ ವಿಶೇಷ ನ್ಯಾಯಾಲಯ 10 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿದೆ.
ಶಂಕಿತ ಉಗ್ರರಾದ ಎ1 ಮೆಹಬೂಬ್ ಪಾಷಾ, ಎ10 ಮೊಹಮದ್ ಮನ್ಸೂರ್, ಎ16 ಜಬಿವುಲ್ಲಾ ಹಾಗೂ ಎ18 ಸಯ್ಯದ್ ಅಜ್ಮತ್ತುಲ್ಲಾರನ್ನು ಸಿಸಿಬಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ನಿನ್ನೆ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರಪ್ಪನ ಪಾಳ್ಯದಲ್ಲಿ ನಾಲ್ವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಹೆಚ್ಚಿನ ತನಿಗೆ ಒಳಪಡಿಸುವ ಅವಶ್ಯಕತೆ ಇರುವುದರಿಂದ 52ನೇ ಸಿಸಿಹೆಚ್ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ನ್ಯಾಯಾಲಯದ ಆದೇಶದಂತೆ ಜನವರಿ 27ರ ವರೆಗೆ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿ ಆರೋಪಿಗಳು ಇರಲಿದ್ದಾರೆ. ಶಂಕಿತ ಉಗ್ರರು ಬೆಂಗಳೂರು ಸೇರಿದಂತೆ ಹಲವಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಸಿಸಿಬಿ ಎಸಿಬಿಗಳಾದ ವೇಣುಗೋಪಾಲ್ ಹಾಗೂ ಎಸಿಪಿ ನಾಗರಾಜ್ ನೇತೃತ್ವದಲ್ಲಿ ಆರೋಪಿಗಳನ್ನ ತನಿಖೆಗೆ ಒಳಪಡಿಸಲಾಗಿದೆ. ಆರೋಪಿಗಳು ಕೋಮು ಗಲಭೆ ಸೃಷ್ಟಿಸಲು ಹಾಗೂ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಆರೋಪಿಗಳಿಗೆ ಕೆಲವು ಅಂತರ್ ರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ನಂಟಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖಾ ತಂಡ ಮುಂದಾಗಿದೆ. ಶಂಕಿತ ಉಗ್ರರ ತನಿಖೆ ವೇಳೆ ಮತ್ತಷ್ಟು ಮಹತ್ವದ ಮಾಹಿತಿ ಲಭಿಸುವ ಸಾಧ್ಯತೆ ಇದೆ.