ತುಮಕೂರು: ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ವೀಕ್ಷಿಸಲು ಭಕ್ತರು ನಿಂತಿದ್ದ ಬಿಲ್ಡಿಂಗ್ ಸಜ್ಜ ಕಳಚಿ ಬಿದ್ದು 30 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.
ದೇಶದ ಅತೀ ದೊಡ್ಡ ಅಗ್ನಿಕೊಂಡ ಎಂದು ಪ್ರಸಿದ್ಧಿಯಾಗಿರುವ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ ನೋಡಲು ಬುಧವಾರ ಸಾವಿರಾರು ಮಂದಿ ಭಕ್ತರು ಕಿಕ್ಕಿರಿದು ಸೇರಿದ್ದರು. ದೇವಸ್ಥಾನದ ಅಕ್ಕಪಕ್ಕದ ಬಿಲ್ಡಿಂಗ್ ಮೇಲೆ ಜನರು ಹತ್ತಿ ನಿಂತು ವೀಕ್ಷಣೆ ಮಾಡುತ್ತಿದ್ದರು.
ಹಳೆಯ ಬಿಲ್ಡಿಂಗ್ ಆಗಿದ್ದರಿಂದ ಜನರ ಭಾರ ಹೆಚ್ಚಾಗಿ ಸಜ್ಜ ಕಳಚಿ ಬಿದ್ದಿದೆ. ಹೀಗಾಗಿ ಅದರ ಮೇಲೆ ಹಾಗೂ ಕೆಳಗೆ ನಿಂತಿದ್ದವರ ಮೇಲೆಯೂ ಬಿದ್ದಿದ್ದು, ಪರಿಣಾಮ ಅಲ್ಲಿದ್ದ ಜನರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಣ್ಣ ಪುಟ್ಟ ಗಾಯಗೊಂಡವರು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.