ಚಿತ್ರದುರ್ಗ: 24 ಗಂಟೆಯೊಳಗೆ ಒಂದೇ ಮನೆಯ ಮೂವರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಪಾಳ್ಯದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ 3 ವರ್ಷದ ಮಗು ಕೀರ್ತನಾ ಅಸ್ವಸ್ಥಗೊಂಡಿದ್ದಳು. ಹಾವು ಕಡಿದು ಮಗು ಅಸ್ವಸ್ಥಳಾಗಿದ್ದು ಅಂತ ಮನೆ ಮಂದಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಅನಾರೋಗ್ಯ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ತಾಯಿಯೂ ಅಸ್ವಸ್ಥರಾಗಿದ್ದರು. ಮಾರ್ಗ ಮಧ್ಯೆ ಮಗು ಮೃತಪಟ್ಟಿದ್ದು, ಸ್ವಲ್ಪ ಸಮಯದಲ್ಲಿ ತಾಯಿಯೂ ಮೃತಪಟ್ಟಿದ್ದಾರೆ.
ಮಗುವಿನ ಸಾವಿನ ಆಘಾತಗೊಂಡ ತಾಯಿ ಮೃತಪಟ್ಟಿದ್ದಾರೆ ಅಂತ ಹೇಳಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ತಾಯಿ ರಂಜಿತಾ ಬಾಯಲ್ಲಿ ನೊರೆ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಮಗು ಮತ್ತು ತಾಯಿಯ ಶವ ಪರೀಕ್ಷೆ ನಡೆಸಿದ ನಂತರ ಹಾವು ಕಚ್ಚಿ ಮೃತಪಟ್ಟಿದ್ದಾರೆ ಅಂತ ವೈದ್ಯರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಇವರಿಬ್ಬರ ಶವಸಂಸ್ಕಾರ ಮಾಡಿ ಮನೆಗೆ ಬಂದು ರೋಧಿಸುತ್ತಿದ್ದ ರಂಜಿತಾ ಮಾವ ಮಡ್ನಪ್ಪ (65) ಅವರಿಗೂ ಹಾವು ಕಚ್ಚಿದ್ದು, ಅವರನ್ನು ಕೂಡಲೇ ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮಡ್ನಪ್ಪ ಅವರಿಗೆ ಹಾವು ಕಚ್ಚಿ ಅವರು ಕಿರುಚಿಕೊಂಡಾಗ ಮಗಳು ಲಕ್ಷ್ಮಮ್ಮ ಸ್ಥಳಕ್ಕೆ ಬಂದಿದ್ದು, ಹಾವನ್ನು ನೋಡಿ ಓಡಿಹೋಗಿದ್ದಾರೆ. ಘಟನೆಯ ಬಳಿಕ ಗ್ರಾಮಸ್ಥರು ಹಾವನ್ನು ಹಿಡಿದು ಸಾಯಿಸಿದ್ದಾರೆ.
ಹಿರಿಯೂರು ತಾಲೂಕು ಹಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.