ಉಡುಪಿ: 2ಜಿ ಹಗರಣದ ಬಲೆಯಿಂದ ಕರುಣಾನಿಧಿ ಪುತ್ರಿ ಕನಿಮೋಳಿ ಹೊರಬಂದಾಗಿದೆ. ಸಿಬಿಐ ವಿಶೇಷ ಕೋರ್ಟ್ ಕನಿಮೋಳಿಯನ್ನು ಖುಲಾಸೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಆದರೆ 2 ಜಿ ಭ್ರಷ್ಟಚಾರ ಆರೋಪದಿಂದ ಕನಿಮೋಳಿ ಅವರು ಹೊರ ಬರಲು ಸಾಧ್ಯವೇ ಇಲ್ಲ ಎಂದು ವಿಶ್ಲೇಷಿಸಲಾಗಿದ್ದ ಎಲ್ಲರಿಗೂ ಅಚ್ಚರಿಯಾಗಿದ್ದು, ಇದಕ್ಕೆ ಪ್ರಮುಖ ಕಾರಣ ಉಡುಪಿ ಶ್ರೀ ಕೃಷ್ಣನೇ ಎನ್ನುವ ವಾದ ಹುಟ್ಟಿಕೊಂಡಿದೆ.
ಆದರೆ ಕನಿಮೋಳಿ ಪ್ರಕರಣಕ್ಕೂ ಉಡುಪಿ ಶ್ರೀ ಕೃಷ್ಣ ಮಠಕ್ಕೂ ಏನು ಸಂಬಂಧ ಎಂಬ ಮಾಹಿತಿ ತಿಳಿಯಬೇಕಾದರೆ ಆರು ವರ್ಷಗಳ ಹಿಂದಿನ ಘಟನೆ ತೆರೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣನ ಪೂಜಾಧಿಕಾರವನ್ನು ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನೋಡಿಕೊಳ್ಳುತ್ತಿದ್ದರು.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಶೀರೂರು ಶ್ರೀಗಳು, ಆರು ವರ್ಷದ ಹಿಂದೆ ಕನಿಮೋಳಿಯವರ ತಾಯಿ ರಜತಿ ಅವರು ಮಠಕ್ಕೆ ಬಂದಿದ್ದರು. ತಮ್ಮ ಕುಟುಂಬದಲ್ಲಿ ಗೊಂದಲಗಳಾಗಿದೆ. ತನ್ನ ಮಗಳಿಗೆ ಮಾಡದ ತಪ್ಪಿಗೆ ಶಿಕ್ಷೆಯಾಗಿ ಜೈಲು ಸೇರಿದ್ದಾಳೆ. ಹೀಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಕೇಳಿಕೊಂಡಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಜತಿ ಅವರಿಗೆ ಧೈರ್ಯ ತುಂಬಿದ್ದ ಶ್ರೀಗಳು ತಪ್ಪು ಮಾಡದಿದ್ದರೆ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಅವರ ಮನವಿಯಂತೆ ಪೂಜೆಯ ಸಂದರ್ಭ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದೆವು. ಇದೀಗ ಕನಿಮೋಳಿ ಅವರು ಆರೋಪ ಮುಕ್ತರಾಗಿದ್ದಾರೆ ಎಂದು ವಿವರಿಸಿದರು.
ಉಡುಪಿಯಲ್ಲಿ ಶ್ರೀಕೃಷ್ಣ ಭಕ್ತರ ಕಣ್ಮಣಿ, ಆದರೂ ಮಠದೊಳಗೆ ಮುಖ್ಯಪ್ರಾಣ ಅಂದರೆ ಆಂಜನೇಯ ದೇವರು ಹೆಚ್ಚು ಶಕ್ತಿಯನ್ನು ಹೊಂದಿದ್ದಾರೆ ಎಂಬ ನಂಬಿಕೆ ಇದೆ. ಕೃಷ್ಣ ಮುಖ್ಯಪ್ರಾಣರಿಗೆ ಮಾಡಿದ ಪ್ರಾರ್ಥನೆ ಫಲ ನೀಡಿದೆ. ಕರುಣಾನಿಧಿ ಕುಟುಂಬ ಹರಕೆ ತೀರಿಸಲು ಮತ್ತೆ ಉಡುಪಿಗೆ ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಶ್ರೀ ಶೀರೂರು ಸ್ವಾಮೀಜಿ ಹೇಳಿದರು.
ಹರಕೆ ಹೊತ್ತಿದ್ದರೆ, ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ ವೇಳೆ ಮತ್ತೆ ಬರುವುದಾಗಿ ಹೇಳಿಕೊಂಡಿದ್ದರೆ ಮತ್ತೆ ಉಡುಪಿಗೆ ಬಂದು ಕೃಷ್ಣಮುಖ್ಯಪ್ರಾಣರ ಸನ್ನಿಧಿಗೆ ಭೇಟಿಕೊಡಬೇಕು ಎಂಬ ನಂಬಿಕೆ ಭಕ್ತರಲ್ಲಿ ಇದೆ.