– ಕಲಬುರಗಿ ಮಾರ್ಗದ ಬಸ್ಗಳು ಖಾಲಿ
ರಾಯಚೂರು: ಕೊರೊನಾ ಎಲ್ಲೆಡೆ ಭೀತಿ ಹುಟ್ಟಿಸಿರುವ ಜೊತೆಗೆ ಆರ್ಥಿಕತೆಯ ಹೊಡೆತವನ್ನು ಕೊಟ್ಟಿದೆ. ಸಾರಿಗೆ ಇಲಾಖೆಯಂತೂ ಎಂದು ಕಂಡರಿಯದ ನಷ್ಟವನ್ನು ಈಗ ಅನುಭವಿಸುತ್ತಿದೆ.
ರಾಯಚೂರಿನಲ್ಲಿ ಜನರಿಲ್ಲದೆ ಬಸ್ಗಳ ಸಂಚಾರವೇ ವಿರಳವಾಗಿದೆ. ಕಳೆದ ಆರು ದಿನಗಳಲ್ಲಿ ರಾಯಚೂರು ವಿಭಾಗಕ್ಕೆ 28 ಲಕ್ಷ ರೂ. ಅಧಿಕ ನಷ್ಟವಾಗಿದೆ ಎಂದು ರಾಯಚೂರು ವಿಭಾಗೀಯ ನಿಯಂತ್ರಕ ಅಧಿಕಾರಿ ಎಂ ವೆಂಕಟೇಶ ಹೇಳಿದ್ದಾರೆ.
ಕಲಬುರಗಿಯಲ್ಲಿ ಒಂದು ಸಾವು ಹಾಗೂ ಇಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜನ ಇನ್ನಷ್ಟು ಭಯಭೀತರಾಗಿದ್ದಾರೆ. ವಿಭಾಗದಿಂದ ದಿನವೊಂದಕ್ಕೆ ಸರಾಸರಿ 30 ಬಸ್ಗಳ ಸಂಚಾರ ರದ್ದಾಗಿದ್ದು, ದಿನಕ್ಕೆ 100 ಟ್ರಿಪ್ ಬಸ್ ಸಂಚಾರ ಕಡಿತವಾಗಿದೆ. ಶ್ರೀಶೈಲ ಜಾತ್ರೆ ಹಿನ್ನೆಲೆಯಲ್ಲಿ 55 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೇವಲ 15 ಬಸ್ಗಳಲ್ಲಿ ಮಾತ್ರ ಜನ ಸಂಚಾರ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯ 8 ಡಿಪೋಗಳಲ್ಲಿ ಒಟ್ಟು 660 ಬಸ್ಗಳು ಓಡಾಡುತ್ತಿವೆ. ಕಲಬುರಗಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ನಂತರ ಜನರು ಬಸ್ ಸಂಚಾರ ಮಾಡುತ್ತಿಲ್ಲ ಎಂದು ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಕ ಎಂ. ವೆಂಕಟೇಶ್ ತಿಳಿಸಿದ್ದಾರೆ.