ಮಂಗಳೂರು: ಉಳ್ಳಾಲದ ಮೊಗವೀರಪಟ್ಟಣದ ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಚೀನಾದ ಬಾರ್ಜ್ ಹಡಗು ಅಪಘಾತಕ್ಕೀಡಾಗಿದ್ದು, ಹಡಗಿನಲ್ಲಿದ್ದ ನೌಕರರ ರಕ್ಷಣಾ ಕಾರ್ಯಾಚರಣೆ ಅಂತ್ಯವಾಗಿದೆ.
ಒಟ್ಟು 27 ಮಂದಿ ನೌಕರರು ಬಾರ್ಜ್ ನಲ್ಲಿ ಸಿಲುಕಿಕೊಂಡಿದ್ದರು. ಶನಿವಾರದಂದು ನಾಲ್ವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು. ಇಂದು 23 ನೌಕರರನ್ನು ರಕ್ಷಣೆ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಬೋಟ್ ನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರ ರಾತ್ರಿ 8 ಗಂಟೆ ವೇಳೆಗೆ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಬೆಳಗ್ಗೆ 6 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಶುರು ಮಾಡಿದ್ದು, 23 ನೌಕರರನ್ನ ರಕ್ಷಿಸಲಾಗಿದೆ.
ಉಳ್ಳಾಲ ಕಡಲ ತೀರದಲ್ಲಿ ತಡೆಗೋಡೆ ಮತ್ತು ಡ್ರೆಜ್ಜಿಂಗ್ ಕಾಮಗಾರಿ ನಡೆಸುತ್ತಿದ್ದ ಬಾರ್ಜ್ ಶನಿವಾರ ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದು ದುರಂತಕ್ಕೀಡಾಗಿತ್ತು. ಹಡಗಿನೊಳಗೆ ನೀರು ನುಗ್ಗುತ್ತಿದ್ದ ಹಾಗೆ ಶಿಫ್ಟ್ ಕ್ಯಾಪ್ಟನ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾಡಳಿತ ಕೂಡಲೇ ಇಂಡಿಯನ್ ಕೋಸ್ಟ್ ಗಾರ್ಡಿಗೆ ಮಾಹಿತಿ ನೀಡಿದ್ದು, ಸಂಜೆ 6 ಗಂಟೆಗೆ ಭಾರತೀಯ ಇಂಡಿಯನ್ ಕೋಸ್ಟ್ ಗಾರ್ಡ್ನ ಅಮರ್ಥ್ಯ ಹೆಸರಿನ ಹಡಗು ಧಾವಿಸಿ ಬಂತು.