ತಿರುವನಂತಪುರಂ: 2023ರ ವಿಶ್ವಕಪ್ ಆಡುವುದೇ ತಮ್ಮ ಮುಂದಿರುವ ಬಹುದೊಡ್ಡ ಗುರಿ, ನನ್ನ ಮಾತು ಕೇಳಲು ಅಚ್ಚರಿ ಎನಿಸಿದರೂ ಈ ಬಗ್ಗೆ ನನಗೆ ನಂಬಿಕೆ ಇದೆ ಎಂದು ಕ್ರಿಕೆಟಿಗ ಎಸ್.ಶ್ರೀಶಾಂತ್ ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್ ಆಡುವ ವಿಶ್ವಾಸವಿದೆ. ಎಂದೂ ನಮ್ಮ ಗುರಿಗಳು ಉನ್ನತಮಟ್ಟದಲ್ಲಿರಬೇಕು, ನನ್ನ ಲಕ್ಷ್ಯವೂ ಎತ್ತರದಲ್ಲಿರುತ್ತವೆ. ಒಂದೊಮ್ಮೆ ಒಬ್ಬ ಅಥ್ಲೀಟ್ ಚಿಕ್ಕ ಗುರಿಯನ್ನು ಹೊಂದಿದ್ದರೆ ಸಾಧಾರಣ ವ್ಯಕ್ತಿಯಾಗಿ ಪರಿವರ್ತನೆ ಆಗುತ್ತಾನೆ ಎಂದು ಶ್ರೀಶಾಂತ್ ಹೇಳಿದ್ದಾರೆ.
- Advertisement 2
- Advertisement 3
ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ನಿಷೇಧ ಮುಗಿದ ಬಳಿಕ ಕೇರಳ ಪರ ರಣಜಿ ಟ್ರೋಫಿ ಆಡುವ ಅವಕಾಶ ನೀಡಲಾಗಿದೆ. ಈಗಾಗಲೇ ಕೇರಳ ಕ್ರಿಕೆಟ್ ಬಿಡುಗಡೆ ಮಾಡಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ಗೆ ಸ್ಥಾನ ನೀಡಿದೆ. ಶ್ರೀಶಾಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ರಣಜಿ ಆಡುವುದು ಬಹುತೇಕ ಖಚಿತವಾಗಿದೆ.
- Advertisement 4
ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿದೆ. ಅಲ್ಲದೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.