ಬೆಂಗಳೂರು: ಟಿಪ್ಪು ಸುಲ್ತಾನ್(Tipu Sultan) ವಿಚಾರ ಮತ್ತೆ ಚುನಾವಣೆ(Election) ಅಸ್ತ್ರವಾಗುವ ಮುನ್ಸೂಚನೆ ಸಿಗುತ್ತಿದೆ. ಕಾಂಗ್ರೆಸ್(Congress) ವಿರುದ್ಧ ಟಿಪ್ಪು ಅಸ್ತ್ರ ಪ್ರಯೋಗಕ್ಕೆ ವೇದಿಕೆಯನ್ನು ಬಿಜೆಪಿ(BJP) ಸಿದ್ಧ ಮಾಡಿದೆ. ಈಗ ಕೊಲ್ಲೂರು ಮೂಕಾಂಬಿಕೆಗೆ ಮಾಡುತ್ತಿರುವ ಸಲಾಂ ಆರತಿ ಹೆಸರು ಬದಲಿಸುವ ಹೊಸ ಆಟ ಶುರು ಆಗಿದೆ.
ಮೈಸೂರು – ಬೆಂಗಳೂರು ನಡುವಿನ ಟಿಪ್ಪು ಎಕ್ಸ್ಪ್ರೆಸ್(Tipu Express) ರೈಲಿನ ಹೆಸರು ಒಡೆಯರ್ ಎಕ್ಸ್ಪ್ರೆಸ್(Wodeyar Express) ಆಗಿ ಬದಲಾಗಿದೆ. ಈ ವಿಚಾರವಾಗಿ ಬಿಜೆಪಿ ಕ್ರೆಡಿಟ್ ತೆಗೆದುಕೊಂಡರೆ ಕಾಂಗ್ರೆಸ್ ನಾಯಕರು ಇದು ದ್ವೇಷ, ಟಿಪ್ಪು ಇತಿಹಾಸದ ಭಾಗ ಎಂದು ಹೇಳುತ್ತಿದ್ದಾರೆ. ಟಿಪ್ಪು ಹೆಸರಿನಲ್ಲಿ ಮತ್ತೆ ರಾಜಕೀಯ ಕೆಸರೆರಚಾಟ ಜೋರಾಗುತ್ತಿದೆ.
ಕಾಂಗ್ರೆಸ್ ನಾಯಕರ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ನಾಯಕರು ಕೈ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ಬೇಕಾದರೆ ಜಿನ್ನಾ, ಲಾಡೆನ್, ಘಜ್ನಿ ರೈಲು ಬಿಡಲಿ. ಆದರೆ ಟಿಪ್ಪು ಬೇಡ, ಅವನು ಕನ್ನಡಿಗನಲ್ಲ ಎಂದು ಸಚಿವ ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ರೈಲಿಗಿಟ್ಟಿದ್ದ ಟಿಪ್ಪು ಹೆಸರೇಕೆ ತೆಗೆಯಬೇಕಿತ್ತು, ಬೇರೆ ಟ್ರೈನ್ಗೆ ಒಡೆಯರ್ ಹೆಸರಿಡಲಿ: ಹೆಚ್.ಡಿ. ರೇವಣ್ಣ
2018ರ ಚುನಾವಣೆ ಸಂದರ್ಭದಲ್ಲೂ ಟಿಪ್ಪು ವಾರ್ ತಾರಕಕ್ಕೇರಿತ್ತು. ಆಗ ಕಾಂಗ್ರೆಸ್ ಟಿಪ್ಪು ಪರ ಮಾತನಾಡಿದ್ದನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡು ಅಭಿಯಾನ ಮಾಡಿತ್ತು. ಈಗಲೂ ಅದೇ ಮುನ್ಸೂಚನೆ ಸಿಗುತ್ತಿದ್ದು, ಕೊಲ್ಲೂರು ಮೂಕಾಂಬಿಕಾ ದೇವಾಲಯದ ನಡೆಯವ ಸಲಾಂ ಆರತಿ ಬದಲಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಸ್ಥಳೀಯರಿಂದ ಮನವಿ ಬಂದ್ರೆ ಸಲಾಂ ಹೆಸರಿನ ಆರತಿ ನಿಲ್ಲಿಸುವುದಾಗಿ ಬಿಜೆಪಿ ಸಚಿವರು, ಶಾಸಕರು ಹೇಳಿದ್ದಾರೆ.
ಒಟ್ಟಿನಲ್ಲಿ ಟಿಪ್ಪು ವಿಚಾರ ಎತ್ತಿದರೆ ಕೆಂಡವಾಗುವ ಬಿಜೆಪಿಗೆ ಕಾಂಗ್ರೆಸ್ ಅಸ್ತ್ರವನ್ನ ಕೊಡುತ್ತಾ? ಬಿಜೆಪಿ ಅಸ್ತ್ರವನ್ನೇ ತಲೆಕೆಳಗೆ ಮಾಡಿ ಟಿಪ್ಪುವನ್ನು ಕಾಂಗ್ರೆಸ್ ಹೇಗೆ ಸಮರ್ಥಿಸುತ್ತದೆ ಎನ್ನುವುದು ಸದ್ಯದ ಕುತೂಹಲ.