ಮಂಗಳೂರು: ಸುಮಾರು 20 ವರ್ಷಗಳಿಂದ ಕಾಟಿಪಳ್ಳ 4ನೇ ಬ್ಲಾಕ್ ನಲ್ಲಿ ನಿವಾಸಿ ಮೀನಾಕ್ಷಿ ಮತ್ತು ಮನೆಯವರು ತೀರಾ ಬಡತನದಿಂದಾಗಿ ವಿದ್ಯುತ್ ಸಂಪರ್ಕವಿಲ್ಲದೆ ವಾಸವಿದ್ದರು.
ಕಳೆದ ಇಪ್ಪತ್ತು ವರ್ಷಗಳಿಂದಲೂ ವಿದ್ಯುತ್ ಕಾಣದ ಈ ಕುಟುಂಬದ ಸ್ಥಿತಿ ಕಂಡು ಮಂಗಳೂರಿನ ಸುರತ್ಕಲ್ ಸಮೀಪದ ಗಣೇಶಪುರ ಕಾಟಿಪಳ್ಳ ‘ಸೇವಾ ಚಾರಿಟೇಬಲ್ ಟ್ರಸ್ಟ್’ ಸದರಿ ಮನೆಗೆ ಉಚಿತವಾಗಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ವಿದ್ಯುತ್ ದೀಪವನ್ನು ಕಾಣದ ಬಡಕುಟುಂಬದ ಮನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಿ ಕೊಟ್ಟು ಮಾದರಿಯಾಗಿದೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸಲು ಶ್ರೀ ದೇವರು ಶಕ್ತಿ ನೀಡಲಿ ಎಂದು ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ ಟ್ರಸ್ಟ್ನ ಗೌರವ ಕಾನೂನು ಸಲಹೆಗಾರ ಮಯೂರ ಕೀರ್ತಿಯವರು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುರತ್ಕಲ್ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಂಜು ಕಾವು ಹಾಗೂ 5ನೇ ಬ್ಲಾಕ್ ಕೃಷ್ಣಾಪುರ ಪಣಂಬೂರು ಶ್ರೀ ಕೊಡ್ಡು ದೈವಸ್ಥಾನದ ಗುರಿಕಾರ ಲೋಕೇಶ್ರವರು ದೀಪ ಪ್ರಜ್ವಲಿಸಿ, ಪ್ರಶಂಸೆಗೈದು ಶುಭ ಹಾರೈಸಿದರು.
ಕಳೆದ ಡಾಕ್ಡೌನ್ ಸಂದರ್ಭದಲ್ಲಿ ತರಕಾರಿ-ಪಡಿತರ ಕಿಟ್ಗಳನ್ನು ವಿತರಿಸಿದ ಸಂದರ್ಭ ಮೀನಾಕ್ಷಿಯವರ ಮನೆಯ ಪರಿಸ್ಥಿತಿ ನಮ್ಮ ಗಮನಕ್ಕೆ ಬಂದು ಅಂದೇ ಟ್ರಸ್ಟ್ ವತಿಯಿಂದ ಮನೆಗೆ ವಿದ್ಯುತ್ ಸಂಪರ್ಕವನ್ನು ನೀಡುವ ಬಗ್ಗೆ ತೀರ್ಮಾನಿಸಿದ್ದು, ಈ ಮನೆಯ ಪರಿಸ್ಥಿತಿ ತಿಳಿದು ಈ ಬಗ್ಗೆ ವಾಗ್ದಾನ ಮಾಡಿ, ಈ ಸತ್ಕಾರ್ಯ ಸರ್ವರ ಸಹಕಾರದಿಂದ ಸಾಕಾರಗೊಂಡಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಎ.ಪಿ. ಮೋಹನ್ ಗಣೇಶಪುರ ಮಾತನಾಡಿ ಹೇಳಿದರು.
ಟ್ರಸ್ಟ್ನ ಕಾರ್ಯದರ್ಶಿ ದಿನೇಶ್ ಸುವರ್ಣ, ಕೋಶಾಧಿಕಾರಿ ಸಂದೀಪ್ ಕಾಟಿಪಳ್ಳ, ಟ್ರಸ್ಟಿಗಳಾದ ಗಿರೀಶ್ ನಾಯಕ, ಸುಧಾಕರ ಬೊಳ್ಳಾಜೆ, ರವೀಂದ್ರ ಆಚಾರ್ಯ, ಲೋಕನಾಥ್ ಶೆಟ್ಟಿ, ಗಣೇಶ್ ದೇವಾಡಿಗ, ಕಿಶನ್ ಅಮೀನ್ ನಾಗರಾಜ ಸುವರ್ಣ, ಪ್ರಮುಖರಾದ ಗಂಗಾಧರ ಶೆಟ್ಟಿಗಾರ್, ತಾರಾನಾಥ ಶೆಟ್ಟಿಗಾರ್, ಮಂಜುನಾಥ ಪೂಜಾರಿ, ತಾರಾನಾಥ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರರು ಬಾಲಕೃಷ್ಣ ಶೆಟ್ಟಿಗಾರ್, ಮಹಿಳಾ ಸಮಿತಿಯ ಇಂದ್ರಾಕ್ಷಿ ಹರೀಶ್, ಮಮತಾ ರಾವ್, ಜಯಂತಿ ಪಿ.ಟಿ.ರೈ, ಅಕ್ಷಿತಾ ಸಂದೀಪ್, ಲತಾ ಮಹೇಶ್, ಜಯಂತಿ ಗಣೇಶ್ ಮುಂತಾದವರು ಭಾಗವಹಿಸಿದರು.