ಮಂಡ್ಯ: ಅಕ್ರಮವಾಗಿ ಸಾಗಿಸುತ್ತಿದ್ದ 2,60,500 ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ಹೆದ್ದಾರಿಯ ಕದಬಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗುರುವಾರ ಮತದಾನ ಇರುವುದರಿಂದ ಚುನಾವಣಾ ಅಧಿಕಾರಿಗಳು ಮಂಡ್ಯ ಜಿಲ್ಲೆಯಲ್ಲಿ ಹದ್ದಿನ ಕಣ್ಣನ್ನು ಇಟ್ಟಿದ್ದಾರೆ. ಮಂಡ್ಯದಲ್ಲಿ ಅಕ್ರಮ ಕಡಿವಾಣಕ್ಕೆ ಐಟಿ ಹಾಗೂ ಚುನಾವಣಾಧಿಕಾರಿಗಳು ಚಕ್ರವ್ಯೂಹ ರಚಿಸಿದ್ದಾರೆ. ಸುಮಾರು 50 ಕಡೆಗಳಲ್ಲಿ ಐಟಿ ತಂಡ ಸಿಸಿಟಿವಿ ಅಳವಡಿಸಿದ್ದು, ಮಂಗಳವಾರ ರಾತ್ರಿಯೇ ಐಟಿ ಅಧಿಕಾರಿಗಳ ತಂಡ ಮಂಡ್ಯಕ್ಕೆ ಶಿಫ್ಟ್ ಆಗಿದೆ.
ಒಟ್ಟು 15ಕ್ಕೂ ಹೆಚ್ಚು ಕೇಂದ್ರಗಳ ಮೇಲೆ ಐಟಿ ತಂಡ ಹದ್ದಿನ ಕಣ್ಣನ್ನು ಇಟ್ಟಿದೆ. ತೋಟದ ಮನೆ, ಸಿನಿಮಾ ಥಿಯೇಟರ್, ರೈಸ್ ಮಿಲ್, ಸಾ ಮಿಲ್, ಕಲ್ಯಾಣ ಮಂಟಪಗಳು, ಗೋಡೌನ್ಗಳು, ನಿರ್ಮಾಣ ಹಂತದ ಕಟ್ಟಡಗಳು, ಅಕ್ರಮ ಹಣ ಸಾಗಾಣಿಗೆ, ಹಂಚಿಕೆ ನಡೆಯುವ ಜಾಗಗಗಳ ಗುರುತಿಗೆ ಐಟಿ ಮಾಸ್ಟರ್ ಪ್ಲಾನ್ ಮಾಡಿದೆ. ಚುನಾವಣಾ ವೀಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಕ್ಕೆ ಶಿಫ್ಟ್ ಆಗಿದ್ದಾರೆ.