ಹೈದರಾಬಾದ್: ಆಳವಾದ ಹಳ್ಳಕ್ಕೆ ಟ್ರ್ಯಾಕ್ಟರ್ ಉರುಳಿಬಿದ್ದ ಪರಿಣಾಮ 15 ಮಂದಿ ಸಾವನ್ನಪ್ಪಿ, 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಯಡದ್ರಿ ಭುವನಗಿರಿ ಜಿಲ್ಲೆಯ ವಲಿಗೊಂಡ ಗ್ರಾಮದ ಬಳಿ ಸಂಭವಿಸಿದೆ.
ಮೃತರು ವೇಮುಲಕೊಂಡ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಹತ್ತಿ ಬಿಡಿಸುವ ಕೆಲಸದ ನಿಮಿತ್ತ ದಿನಗೂಲಿ ಕಾರ್ಮಿಕರು ಲಕ್ಷ್ಮೀಪುರಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.
ಏನಿದು ಘಟನೆ?
ಭಾನುವಾರ ಬೆಳಗ್ಗೆ ಕೂಲಿ ಕೆಲಸದ ನಿಮಿತ್ತ ವೇಮುಲಕೊಂಡ ಗ್ರಾಮದಿಂದ ಒಟ್ಟು 25 ಮಂದಿ ಟ್ರ್ಯಾಕ್ಟರ್ ನಲ್ಲಿ ಲಕ್ಷ್ಮೀಪುರಕ್ಕೆ ಪ್ರಯಾಣ ಬೆಳಸಿದ್ದರು. ಈ ವೇಳೆ ವಲಿಗೊಂಡ ಎಂಬಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಿದ್ದ ಹಳ್ಳಕ್ಕೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಸ್ಥಳದಲ್ಲೇ 4 ವರ್ಷದ ಬಾಲಕ ಸೇರಿದಂತೆ 15 ಮಂದಿ ಮೃತಪಟ್ಟು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ತಿಳಿಯುತ್ತಿದ್ದಂತೆ ಹತ್ತಿರದ ವೇಮುಲಗೊಂಡ ಪೊಲೀಸರು ಮತ್ತು ರಕ್ಷಣಾ ತಂಡಗಳ ಆಗಮಿಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದು, ಮೃತ ದೇಹಗಳನ್ನು ಹಳ್ಳದಿಂದ ಹೊರಕ್ಕೆ ತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡ 10 ಮಂದಿಯನ್ನು ರಾಮನಾಥಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ವೇಮುಲಗೊಂಡ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ವೆಮುಲಗೊಂಡ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಂ.ಡಿ. ಇದ್ರಿಸ್ ಅಲಿ, ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್ ನಲ್ಲಿದ್ದ 25 ಮಂದಿಯೂ ನೀರು ಪಾಲಗಿದ್ದು, ಹಳ್ಳದಲ್ಲಿ ಮುಳುಗಿ ಕೆಲವರು ಮೃತಪಟ್ಟಿದ್ದರೆ ಟ್ರ್ಯಾಕ್ಟರ್ ಮಗುಚಿ ಇನ್ನುಳಿದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಚಾಲಕ ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ವೇಮುಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.