ಉಡುಪಿ: ನಗರದಲ್ಲಿ ಭಿಕ್ಷಾಟನೆ ನಿರತ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಮತ್ತು ಕಾರ್ಮಿಕಾ ಘಟಕ ಇಂದು ಜಂಟಿ ಕಾರ್ಯಾಚರಣೆ ಮಾಡಿತು.
ಮಣಿಪಾಲ, ಉಡುಪಿ ಉದ್ಯಾವರ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದೀಚೆ ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವವರ ಸಂಖ್ಯೆ ಜಾಸ್ತಿಯಾಗಿತ್ತು. ಸಣ್ಣ ಮಕ್ಕಳನ್ನು ಹಿಡ್ಕೊಂಡು ಮಹಿಳೆಯರು ಭಿಕ್ಷೆ ಬೇಡುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿತ್ತು. ವಿವಿಧ ಇಲಾಖೆಗಳಿಗೆ ಈ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿದ್ದವು. ಕಾರ್ಮಿಕ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಭಿಕ್ಷಾಟನೆ ಮೇಲೆ ನಿಗಾ ವಹಿಸಿತ್ತು.
ಇಂದು ನಡೆದ ಕಾರ್ಯಾಚರಣೆಯಲ್ಲಿ 14 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಗಾದವರಲ್ಲಿ 4 ಬಾಲಕಿಯರನ್ನು ಬಾಲಮಂದಿರಕ್ಕೂ, 10 ಬಾಲಕ ಬಾಲಕಿಯರನ್ನು ಶಂಕರಪುರದ ಸ್ಫೂರ್ತಿ ವಿಶ್ವಾಸದ ಮನೆ ಸಂಸ್ಥೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಯ್ತು. ರಾಜಸ್ಥಾನ, ಆಂಧ್ರಪ್ರದೇಶ ಉತ್ತರ ಕರ್ನಾಟಕ ಗದಗ ಹುಬ್ಬಳ್ಳಿಯಿಂದ ಮಗುವಿನ ಜೊತೆ ಬಂದು ಕೆಲಕಾಲ ಉಡುಪಿಯಲ್ಲಿ ಭಿಕ್ಷಾಟನೆ ಮಾಡಿ ಹಣ ಸಂಪಾದನೆ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲಕಾಲ ಉಡುಪಿಯಲ್ಲಿ ಭಿಕ್ಷಾಟನೆ ಮಾಡಿ ಇಲ್ಲಿಂದ ಬೇರೆ ಊರಿಗೆ ವಲಸೆ ಹೋಗಿ ಅಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಪುನರ್ವಸತಿ ಕೇಂದ್ರಕ್ಕೆ ವಹಿಸಲಾಗಿದ್ದು ಅವರ ಶಿಕ್ಷಣ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಮಕ್ಕಳ ರಕ್ಷಣೆ ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.