ವಿಜಯಪುರ: 130 ರೂ. ಇದ್ದ ಬಿಯರ್ ಬಾಟಲ್ ಬೆಲೆ 270 ರೂ.ಗಳಿಗೆ ಏರಿಕೆಯಾಗಿದೆ. ಗಂಡನಿಗೆ ಕುಡಿಸಿ ಹೆಂಡತಿಗೆ ಗ್ಯಾರಂಟಿ ಕೊಡುವುದಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಎಂಎಲ್ಸಿ ಹೆಚ್.ವಿಶ್ವನಾಥ್ (H.Vishwanath) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಕಾಂಗ್ರೆಸ್ (Congress) ಗ್ಯಾರಂಟಿ ವಿಚಾರವಾಗಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣಕ್ಕಾಗಿ 1 ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡಬಹುದಿತ್ತು. ಉಚಿತ ಆರೋಗ್ಯ ತಪಾಸಣೆ ಕೊಡಬಹುದಿತ್ತು. ತೋಚಿದ್ದನ್ನು ಮಾಡಿದ್ದಾರೆ. ಅದು ಜನರಿಗೆ ಬೇಕಾ? ಬೇಡವಾ? ಎಂಬುವುದನ್ನು ಯೋಚಿಸಿಲ್ಲ. ಒಂದು ಬಿಯರ್ ಬಾಟಲು 130 ರೂ. ಇದ್ದಿದ್ದು 270 ರೂ. ಆಗಿದೆ. ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ಗ್ಯಾರಂಟಿ ಕೊಡುವುದಾ? ನಿಮಗೆ ಗ್ಯಾರಂಟಿ ಕೇಳಿದ್ದು ಯಾರು? ಎಂದು ಗುಡುಗಿದರು.ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಜಟಾಪಟಿ – 1,000, 300 ರೂ. ಪಾಸ್ ಮಾರಾಟಕ್ಕೆ ಮರುಚಾಲನೆ
ನಾನು ರಾತ್ರಿ 11:30ರವರೆಗೂ ಸಿದ್ದರಾಮಯ್ಯನವರಿಗೆ ಕಾದು ಹೇಳಿದ್ದೆ. ಒಂದು ಸಂಸಾರಕ್ಕೆ ಏನು ಸಮಸ್ಯೆ ಇದೆ? ಎನ್ನುವುದನ್ನು ತಿಳಿದು ಮೊದಲು ಅದನ್ನು ಬಗೆಹರಿಸಬೇಕಿದೆ. ದೇವರಾಜ ಅರಸು ಅಕ್ಕಿ ಕೊಡಲಿಲ್ಲ. ಅಕ್ಕಿ ಬೆಳೆಯುವ ಭೂಮಿ ಕೊಟ್ಟಿದ್ದರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆಯ ನಿರ್ಣಯ ಒಳ್ಳೆಯದಲ್ಲ ಎಂದರು.
ಕನ್ನಡ ರಾಜ್ಯೋತ್ಸವವನ್ನು ಸರ್ಕಾರ 50 ವರ್ಷದ ಸುವರ್ಣ ಮಹೋತ್ಸವ ಎಂದು ಕಾರ್ಯಕ್ರಮ ಮಾಡಲು ಹೊರಟಿರುವುದು ಸಂತೋಷವಾಗಿದೆ. ಕನ್ನಡ ವಿಚಾರವಾಗಿ ಬರೀ ಭಾಷಣ ಮಾಡಿಕೊಂಡು ಹೊರಟಿದ್ದಾಗಿದೆ. ಕನ್ನಡದ ಬಗೆಗಿನ ಸಾರ್ಥಕತೆ, ಅದರ ಬಗ್ಗೆ ಧೈರ್ಯವಾಗಿ ಹೇಳುವುದು ಆಗಲಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಸರ್ವಾನು ಮತದಿಂದ ನಿರ್ಣಯ ಮಾಡಿ ರಾಷ್ಟ್ರಾಧ್ಯಕ್ಷರಿಗೆ ಕಳಿಸಿದ್ದರು. ಆದರೆ ಅವರು ಸ್ಪಷ್ಟನೆ ಕೇಳಿದರು. ಈ ವಿಚಾರವಾಗಿ ಏನಾಯಿತು ಎಂಬುದು ಇನ್ನೂ ತಿಳಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇನ್ನೂ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಆದಿಲ್ ಶಾಹಿ ಆಡಳಿತ ಮಾಡಿದ್ದ ಈ ಜಾಗದಲ್ಲಿ ಮುಸ್ಲಿಂರು ಸಹಿತ ಕನ್ನಡ ಚೆನ್ನಾಗಿ ಮಾತನಾಡುತ್ತಿದ್ದರು. ಕನ್ನಡದ ವಿಚಾರವಾಗಿ ಸುಮ್ಮನೆ ಮಾತನಾಡುತ್ತಾರೆ. ರಾಜ್ಯೋತ್ಸವಕ್ಕೆ ಬರೀ ಡಂಗುರ ಇರುತ್ತದೆ. ಆದರೆ ಕೃತಿಯಲ್ಲಿ ಯಾವುದೂ ಆಗಲ್ಲ. ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಆಡಳಿತ ಭಾಷೆಯಾಗಿ ಕನ್ನಡ ಜಾರಿ ಮಾಡುವುದನ್ನು ಉಳಿಸಿಕೊಳ್ಳಿ ಎಂದು ಹೇಳುತ್ತೇನೆ. ಒಂದರಿಂದ ಐದನೇ ತರಗತಿವರೆಗೆ ಕನ್ನಡ ಜಾರಿ ಮಾಡಿ ಎಂದು ಸಿಎಂ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!