ಭೋಪಾಲ್: 12 ವರ್ಷದ ಬಾಲಕನನ್ನು (Boy) ಆತನ ಮೂವರು ಗೆಳೆಯರೇ ಸೈಕಲ್ ಸರಪಳಿಯಿಂದ ಕತ್ತು ಹಿಸುಕಿ, ತಲೆಗೆ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಹತ್ಯೆ (Murder) ನಡೆಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಭಾನುವಾರ ನಡೆದಿದ್ದು, ಸಿಯೋನಿ ಸಮೀಪದ ಮಗರ್ಕಥಾ ಗ್ರಾಮದಲ್ಲಿ ನಡೆದಿದೆ. ಮೂವರು ಆರೋಪಿಗಳೂ ಅಪ್ರಾಪ್ತರಾಗಿದ್ದು (Minors) ಹತ್ಯೆ ನಡೆಸಿದ ಬಳಿಕ ಗೆಳೆಯನ ಶವವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ಎಸೆದಿದ್ದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿ ಬಾಲಕರು ಕ್ರಮವಾಗಿ 16, 14 ಹಾಗೂ 11 ವರ್ಷ ವಯಸ್ಸಿನವರಾಗಿದ್ದಾರೆ. 16 ವರ್ಷದ ಆರೋಪಿ 12 ವರ್ಷದ ಬಾಲಕನ ಸಹೋದರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಜಗಳ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.
ವರದಿಗಳ ಪ್ರಕಾರ 16 ವರ್ಷದ ಆರೋಪಿ ಬಾಲಕ ತನ್ನ ಇನ್ನಿಬ್ಬರು ಸ್ನೇಹಿತರನ್ನು ಸೇರಿಸಿಕೊಂಡು ಸಂತ್ರಸ್ತ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದಿದ್ದಾರೆ. ಅಲ್ಲಿ ಅವರು ಬಾಲಕನಿಗೆ ಸೈಕಲ್ ಚೈನ್ನಿಂದ ಕತ್ತು ಹಿಸುಕಿದ್ದಾರೆ. ಆತ ನೋವಿನಿಂದ ಅಳಲು ಪ್ರಾರಂಭಿಸಿದಾಗ ದೊಡ್ಡ ಕಲ್ಲಿನಿಂದ ಆತನ ತಲೆಯನ್ನು ಚಚ್ಚಿದ್ದಾರೆ. ಬಳಿಕ ಹರಿತವಾದ ಚಾಕುವಿನಿಂದ ಆತನ ಗಂಟಲನ್ನು ಸೀಳಿದ್ದಾರೆ.
ಬಳಿಕ ಬಾಲಕನ ಶವವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ಮನೆಯ ಸಮೀಪ ಕಲ್ಲಿನ ರಾಶಿಯಲ್ಲಿ ಎಸೆದಿದ್ದಾರೆ. ಮಹಿಳೆಯೊಬ್ಬರು ರಕ್ತದ ಕಲೆಯುಳ್ಳ ಚೀಲವನ್ನು ಪತ್ತೆ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೊದಲ ಮತದಾನಕ್ಕೆ ಬಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿದ್ಯಾರ್ಥಿನಿ
ಮೂವರು ಅಪ್ರಾಪ್ತ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ಕಾಲ ಬಾಲಾಪರಾಧಿಗಳ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ಆರೋಪಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಆಟೋ ಚಾಲಕ