ಮಡಿಕೇರಿ: ರಾತ್ರಿ ಕೇರೆಹಾವು ಇರಬೇಕು ಅಂದುಕೊಂಡಿದ್ದ ಮನೆಯವರಿಗೆ ಬೆಳಗ್ಗೆ ಎದ್ದು ನೋಡಿದಾಗ 13 ಅಡಿ ಉದ್ದದ ಕಾಳಿಂಗ ಸೆರೆ ಸಿಕ್ಕ ಘಟನೆಯೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಎಡಪಾಲ ಸಮೀಪದ ಅರಪಟ್ಟು ಗ್ರಾಮದಲ್ಲಿ ನಡೆದಿದೆ.
ಅರಪಟ್ಟು ಗ್ರಾಮದ ಕಿರಣ್ ಬೋಪಯ್ಯನವರ ಮನೆಯಂಗಳದಲ್ಲೇ ಕಾಳಿಂಗ ಸರ್ಪವೊಂದು ವಾಸ್ತವ್ಯ ಹೂಡಿತ್ತು. ಕೇರೆ ಹಾವೊಂದನ್ನು ಸೆರೆ ಹಿಡಿಯಲು ಕಾಳಿಂಗ ಸರ್ಪ ಬಂದಿತ್ತು. ನಂತರ ಆ ಕೇರೆ ಹಾವು ತಪ್ಪಿಸಿಕೊಂಡಿದ್ದರಿಂದ ಆ ಕಾಳಿಂಗ ಸರ್ಪ ಅಲ್ಲೇ ವಾಸ್ತವ್ಯ ಹೂಡಿತ್ತು. ಸದ್ಯ ಮನೆಗೆ ಬಂದಿದ್ದ ಕಾಳಿಂಗ ಸರ್ಪದ ಸುಳಿವನ್ನು ರಾತ್ರಿಯೇ ಬೋಪಯ್ಯನವರ ಮನೆಯಲ್ಲಿ ಸಾಕಿದ್ದ ನಾಯಿ ನೀಡಿತ್ತು.
ನಾಯಿ ಬೊಗಳುವುದನ್ನ ಕೇಳಿಸಿಕೊಂಡು ಕಿರಣ್ ಬೋಪಯ್ಯನವರ ಪತ್ನಿ ಪುಷ್ಪಾ ಹೊರಗಡೆ ಬಂದು ನೋಡಿದಾಗ ಕಾಳಿಂಗ ಸರ್ಪ ಇರುವುದನ್ನು ರಾತ್ರಿಯೇ ಖಚಿತ ಪಡಿಸಿಕೊಂಡಿದ್ದರು. ಆದರೆ ಮನೆಯವರಿಗೆ ಹೇಳಿದಾಗ ಯಾವುದೋ ಕೇರೆಹಾವು ಇರಬೇಕು ಅಂತಾ ಪುಷ್ಪಾ ಅವರ ಮಾತಿಗೆ ಹೆಚ್ಚಿಗೆ ಲಕ್ಷ್ಯ ಕೊಟ್ಟಿರಲಿಲ್ಲ. ಆದರೂ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ನಿದ್ರೆ ಬಿಟ್ಟು ಮನೆ ಮಂದಿಯೆಲ್ಲಾ ಮಲಗಿದ್ದರು.
ಬೆಳಗ್ಗೆ ಮನೆಗೆ ಬಂದ ಕಾಳಿಂಗ ಸರ್ಪ ಮನೆಯಿಂದ ಹೊರಟು ಹೋಗಿರುತ್ತೆ ಎಂದು ತಿಳಿದಿದ್ದರು. ಆದರೆ ಆ ಕಾಳಿಂಗ ಸರ್ಪ ಅಲ್ಲಿಂದ ಹೋಗಲಿಲ್ಲ. ಆಗ ಮನೆಯವರಿಗೆ ನಮ್ಮನೆಯಂಗಳದಲ್ಲಿ ರಾತ್ರಿಯಿಡೀ ಕೇರೆ ಹಾವನ್ನು ಬೇಟೆಯಾಡಲು ಬಂದಿದ್ದು ಕಾಳಿಂಗ ಸರ್ಪ ಎಂದು ತಿಳಿಯಿತು. ತಡಮಾಡದೇ ಸ್ನೇಕ್ ಗಗನ್ ಎಂಬವರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದಾಗ ಸ್ಥಳಕ್ಕೆ ಬಂದು ಅಪರೇಷನ್ ಕಾಳಿಂಗ ಸರ್ಪ ಶುರು ಮಾಡಿ, ಬುಟ್ಟಿಗೆ ಹಾಕಿಕೊಂಡರು. ಕಾಳಿಂಗ ಸರ್ಪನನ್ನು ನೋಡಿದ ಜನತೆ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡರು.
ಇಡೀ ರಾತ್ರಿ ಮನೆಯವರ ನಿದ್ದೆಯನ್ನು ಕದ್ದಿದ್ದ ಕಾಳಿಂಗ ಸರ್ಪ ಬೆಳಗಾಗುತ್ತಲೇ ಹಾವು ರಕ್ಷಕನ ಜೊತೆ ಸೆರೆಯಾಗಿಯೇ ಬಿಟ್ಟಿತ್ತು. ಕೇರೆ ಹಾವೊಂದನ್ನು ಗುರಿಯಾಗಿಸಿಕೊಂಡು ಬೇಟೆಗೆ ಬಂದು ತಾನೇ ಲಾಕ್ ಆಗಿ ಹೋದ. ಕಾಳಿಂಗನ ಹೊಟ್ಟೆ ಸೇರಬೇಕಿದ್ದ ಕೇರೆ ಹಾವು ಅದೃಷ್ಟವಶಾತ್ ಬಚಾವಾಗಿ ಕಾಫಿ ತೋಟ ಸೇರಿದರೆ, ಸ್ನೇಕ್ ಪ್ರಿಯನ ಜೊತೆ ಲಾಕ್ ಆದ ಕಿಂಗ್ ಕೋಬ್ರಾ ಮಾಕುಟ್ಟ ಅರಣ್ಯ ಪ್ರದೇಶದ ಒಳಹೋಗಿ ಕೊನೆಗೂ ಬದುಕಿತು ಬಡಜೀವ ಅಂತಾ ಕೊನೆಗೂ ನಿಟ್ಟುಸಿರು ಬಿಡ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv