ಬೆಂಗಳೂರು: ಮುಷ್ಕರದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ 115 ಸಾರಿಗೆ ನೌಕರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಲ್ಲಿಯವರೆಗೆ 19 ಜನರನ್ನು ಬಂಧಿಸಲಾಗಿದ್ದು, 36 ಬಸ್ ಗಳಿಗೆ ಹಾನಿಯುಂಟಾಗಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 72 ಎಫ್ಐಆರ್ ಗಳು ದಾಖಲಾಗಿವೆ.
ನಿಗಮವಾರು ಎಫ್ಐಆರ್ ಮಾಹಿತಿ: ಕೆಎಎಸ್ಆರ್ಟಿಸಿ-46, ಬಿಎಂಟಿಸಿ-10, ವಾಯುವ್ಯ-9 ಮತ್ತು ಈಶಾನ್ಯ-7 ಸೇರಿದಂತೆ ಒಟ್ಟು 72 ಎಫ್ಐಆರ್ ದಾಖಲಾಗಿವೆ. ಕೆಎಎಸ್ಆರ್ಟಿಸಿ-75, ಬಿಎಂಟಿಸಿ-13, ವಾಯುವ್ಯ-11 ಮತ್ತು ಈಶಾನ್ಯ-16 ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಕೆಎಎಸ್ಆರ್ಟಿಸಿ 24, ಬಿಎಂಟಿಸಿ 1, ವಾಯುವ್ಯ 9, ಈಶಾನ್ಯ ವಿಭಾಗದ 2 ಬಸ್ ಗಳಿಗೆ ಡ್ಯಾಮೇಜ್ ಆಗಿದೆ.
ಮುಷ್ಕರದ ನಡುವೆಯೂ ಇಂದು ಬೆಳಗ್ಗೆ 9 ಗಂಟೆವರೆಗೂ ರಾಜ್ಯಾದ್ಯಂತ 1,897 ಬಸ್ ಗಳು ಸಂಚರಿಸಿವೆ. ಕೆಎಸ್ಆರ್ ಟಿಸಿ 1,000, ಬಿಎಂಟಿಸಿ-226, ಈಶಾನ್ಯ-486 ಮತ್ತು ವಾಯುವ್ಯ-185 ಬಸ್ ಗಳು ರಸ್ತೆಗಿಳಿದಿವೆ.
ಸಾರಿಗೆ ಬಸ್ ಗಳಿಲ್ಲದ ಹಿನ್ನೆಲೆ ಯುಗಾದಿಗೆ ಊರಿಗೆ ತೆರಳುತ್ತಿರುವ ಜನರು ಕೊರೊನಾ ಇರೋದನ್ನ ಮರೆತು ಸಿಕ್ಕ ಸಿಕ್ಕ ವಾಹನಗಳಲ್ಲಿ ಮುಗಿ ಬಿದ್ದು ಪ್ರಯಾಣಿಸುತ್ತಿದ್ದಾರೆ. ಬಸ್ ನಲ್ಲಿ ಜೋತು ಬಿದ್ದು, ಟಾಪ್ ಮೇಲೆ ಕುಳಿತು ಜನರು ಊರುಗಳಿಗೆ ಹೊರಟಿದ್ದಾರೆ. ಬೆಂಗಳೂರು ಹೊರವಲಯ 8 ನೇ ಮೈಲ್, ನವಯುಗ ಟೋಲ್, ಮೈಸೂರು ರಸ್ತೆಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ರಸ್ತೆಗೆ ಬರುವ ಬೆರಳಣಿಕೆ ಬಸ್ ಏರಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಹತ್ತುತ್ತಿದ್ದಾರೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಐರಾವತ ಬಸ್ ಮಾತ್ರ ಓಡಾಟ ಆರಂಭಿಸಿವೆ. ಖಾಸಗಿ ಬಸ್ ಗಳಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನು ಬ್ರೇಕ್ ಮಾಡಲಾಗುತ್ತಿದೆ. ಯುಗಾದಿ ಬಳಿಕ ಮಹಾಮಾರಿ ಕೊರೊನಾ ವೇಗ ಅಧಿಕ ಆಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.